ADVERTISEMENT

‘ನನಗೆ ಟಿಕೆಟ್‌ ತಪ್ಪಿಸುವ ಶಕ್ತಿ ಯಾರಿಗೂ ಇಲ್ಲ’

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 19:30 IST
Last Updated 10 ಜುಲೈ 2017, 19:30 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಳಗಾವಿ: ‘ಜಿಲ್ಲೆಯ ಯಮಕನಮರಡಿ ಕ್ಷೇತ್ರದಿಂದ ನನಗೆ ಟಿಕೆಟ್‌ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ಹುದಲಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಟಿಕೆಟ್‌ ನಿರ್ಧರಿಸುವ ಶಕ್ತಿ ನನಗೇ ಇದೆ; ಬೇಡ ಎನ್ನುವವರಿಗೆ ಇಲ್ಲ. ಇಷ್ಟು ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಸುಲಭವಾಗಿ ಸೋಲು ಒಪ್ಪಿಕೊಂಡಿಲ್ಲ’ ಎಂದರು.

‘ಜಾರಕಿಹೊಳಿ ಕುಟುಂಬದಲ್ಲಿ ಮೂರ್ನಾಲ್ಕು ಜನ ಇದ್ದಾರೆ. ಆದರೆ ನಾನೇ ಬೇರೆ. ನಾನು ರಾಯಚೂರು, ಖಾನಾಪುರದಿಂದ ಸ್ಪರ್ಧಿಸುತ್ತೇನೆ ಎಂದು ಹೇಳುತ್ತ ಕೆಲವರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಯಾರೂ ಕಿವಿಕೊಡಬಾರದು’ ಎಂದು ಮನವಿ ಮಾಡಿದರು.

ADVERTISEMENT

‘ನಾನು ಬಿಜೆಪಿಗೆ ಹೋಗುತ್ತೇನೆ ಎಂದು ಹೇಳುವವರೂ ಇದ್ದಾರೆ. ನಾಳೆ ಎಂಇಎಸ್‌ಗೆ ಹೋಗುವುದಾಗಿ ಹೇಳಿದರೂ ಆಶ್ಚರ್ಯವಿಲ್ಲ. ಚುನಾವಣೆ ಸಮೀಸುತ್ತಿದ್ದಂತೆಯೇ ಈ ರೀತಿ ಗೊಂದಲ ಸೃಷ್ಟಿಸುವ ಕೆಲಸ ಮಾಡುವವರು ಇರುತ್ತಾರೆ. ಪಕ್ಕದ ಗೋಕಾಕ ಕ್ಷೇತ್ರದಲ್ಲಿನ ಪರಿಸ್ಥಿತಿ ನಮ್ಮ  ಕ್ಷೇತ್ರದಲ್ಲಿ ಬರುವುದು ಬೇಡ’ ಎಂದು ಮಾರ್ಮಿಕವಾಗಿ ಸಹೋದರ ರಮೇಶ ಜಾರಕಿಹೊಳಿ ಟೀಕಿಸಿದರು.

‘ಕ್ರಿಕೆಟ್‌, ಕಬಡ್ಡಿ ಆಡಿಸಿ, ದೇವಸ್ಥಾನ ಕಟ್ಟಿಸಲು ಹಣ ನೀಡುವವರು ಇಲ್ಲಿ ಬಂದು ಏನು ಮಾಡುತ್ತಾರೆ? ನಾನು ಜನರನ್ನು ಹಾಳು ಮಾಡಲು ಹಣ ಹಂಚುವುದಿಲ್ಲ. ಸಾಮಾಜಿಕ ಚಟುವಟಿಕೆಗಳಿಗೆ ಖರ್ಚು ಮಾಡುತ್ತೇನೆ. ರಾತ್ರಿ ಊಟದ ಖರ್ಚಿಗೆ ಹಣ ಕೊಡುವವರಿಗೆ ಮಾರು ಹೋಗಬೇಡಿ’ ಎಂದು ಮತದಾರರನ್ನು ಕೋರಿದರು.

‘ಸಮಾಜ ಸೇವಾನಿರತ ಸಂಘ - ಸಂಸ್ಥೆಗೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತೇನೆ. ಮಾಂಸದೂಟ ಮಾಡಿಸಲು ಹಣ ವ್ಯಯಿಸುವುದಿಲ್ಲ. ನೂರು ರೂಪಾಯಿಗಾಗಿ ಸ್ವಾಭಿಮಾನ ಧಾರೆ ಎರೆಯಬೇಡಿ. ಈಗಿನಿಂದಲೇ ಚುನಾವಣೆಗೆ ಸಿದ್ಧರಾಗಬೇಕು’ ಎಂದು ಕಾರ್ಯಕರ್ತರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.