ಹುಬ್ಬಳ್ಳಿ: ‘ಸರ್ಕಾರಿ ನೌಕರರಿಗೆ ನಿವೃತ್ತಿ ವೇತನ ನೀಡಲು ಯಾವುದೇ ಕಟ್ ಆಫ್ ದಿನಾಂಕ ನಿಗದಿ ಮಾಡಬಾರದು. ಈ ವಿಷಯದಲ್ಲಿ ಕೇಂದ್ರ ಸರ್ಕಾರದ ನಿಯಮವನ್ನೇ ರಾಜ್ಯ ಸರ್ಕಾರವೂ ಪಾಲಿಸಬೇಕು’ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮನವಿ ಮಾಡಿದ್ದಾರೆ.
ಈ ಬಗ್ಗೆ, 6ನೇ ವೇತನ ಆಯೋಗದ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ‘ಬಹಳ ಹಿಂದೆಯೇ ನಿವೃತ್ತರಾದವರ ನಿವೃತ್ತಿ ವೇತನ ಅತಿ ಕಡಿಮೆ ಇರುವುದನ್ನು ಮನಗಂಡ 6ನೇ ವೇತನ ಆಯೋಗವು, ಅವರ ಪಿಂಚಣಿ ಹೆಚ್ಚಿಸಲು ಶಿಫಾರಸು ಮಾಡಿದೆ. ಆದರೆ, 1993ರ ಜುಲೈ 1ಕ್ಕಿಂತ ಮೊದಲು ನಿವೃತ್ತರಾದವರಿಗೆ ಮಾತ್ರ ಇದನ್ನು ಅನ್ವಯಿಸಿರುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.
‘2006ರ ಜನವರಿ 1ರಿಂದ ನಿವೃತ್ತಿ ಹೊಂದಿದವರಿಗೆ ನಿವೃತ್ತಿ ಹಾಗೂ ಕುಟುಂಬ ವೇತನವನ್ನು ಹೆಚ್ಚಿಸಿರುವ ಕೇಂದ್ರ ಸರ್ಕಾರ, ಯಾವುದೇ ಕಟ್ ಆಫ್ ದಿನಾಂಕ ನಿಗದಿ ಪಡಿಸದೆ, ವಯೋಮಿತಿ ಆಧಾರದ ಮೇಲೆ ಪಿಂಚಣಿ ಪ್ರಮಾಣ ನಿಗದಿಪಡಿಸಿದೆ. ಇದರ ಪರಿಣಾಮ 80ರಿಂದ 85 ವರ್ಷದೊಳಗಿನವರಿಗೆ ಶೇ 20, 85ರಿಂದ 90ರೊಳಗಿನವರಿಗೆ
ಶೇ 30 ಹಾಗೂ 90 ವರ್ಷ ಮೇಲ್ಪಟ್ಟವರಿಗೆ ಶೇ 50ರಷ್ಟು ಮೂಲ ಹಾಗೂ ಕುಟುಂಬ ನಿವೃತ್ತಿ ವೇತನ ಸಿಗುತ್ತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.