ADVERTISEMENT

ಪಕ್ಷದಲ್ಲಿ ಅವಮಾನ ತಾಳಲಾರೆ-ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 19:30 IST
Last Updated 20 ಅಕ್ಟೋಬರ್ 2012, 19:30 IST
ಪಕ್ಷದಲ್ಲಿ ಅವಮಾನ ತಾಳಲಾರೆ-ಬಿಎಸ್‌ವೈ
ಪಕ್ಷದಲ್ಲಿ ಅವಮಾನ ತಾಳಲಾರೆ-ಬಿಎಸ್‌ವೈ   

ಶಿವಮೊಗ್ಗ: `ಕುರ್ಚಿಗಾಗಿ ಪಕ್ಷ ಬಿಡುತ್ತಿಲ್ಲ; ಅವಮಾನ ತಾಳಲಾರದೆ ಹೊರಗೆ ಬರುತ್ತಿದ್ದೇನೆ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ನಗರದ ಸಾಗರ ರಸ್ತೆಯ ಪಿಇಎಸ್ ಕಾಲೇಜಿನ ಆವರಣದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ `ಪರಾಮರ್ಶೆಯ ಪರಿಕ್ರಮ, ನಿಮ್ಮ ಸಮಕ್ಷಮ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾತ್ಕಾಲಿಕವಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಿರಿ ಎಂಬ ವರಿಷ್ಠರ ವಾಗ್ದಾನದಂತೆ ಪಕ್ಷಕ್ಕೆ ಗೌರವ ಕೊಟ್ಟು ರಾಜೀನಾಮೆ ನೀಡಿದೆ. ಆದರೆ, ತದನಂತರ ಮಾಡಿದ್ದೇನು ಎಂದು ಪ್ರಶ್ನಿಸಿದ ಅವರು, ದೇಶದ ಜನರ ಮುಂದೆ ಕಳಂಕಿತನನ್ನಾಗಿ ಬಿಂಬಿಸಿದರು. ರಾಜ್ಯದ ಅಧ್ಯಕ್ಷರು ತಾನಾಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎಂದು ನನ್ನನ್ನು ಅವಮಾನ ಮಾಡಿದರು. ನಾನು ಕಟ್ಟಿದ ಪಕ್ಷದಲ್ಲಿ ಇಷ್ಟೊಂದು ಅವಮಾನ ಮಾಡಿಸಿಕೊಂಡು ಇರಬೇಕೇ ಎಂದು ನೆರೆದಿದ್ದವರನ್ನು ಕೇಳಿದರು.

ಗಡ್ಕರಿ ಅವರು ಕಾರ್ಯಕ್ರಮ     ವೊಂದಕ್ಕೆ ಬೆಂಗಳೂರಿಗೆ ಬಂದಾಗ ಏರ್‌ಫೋರ್ಟ್‌ನಿಂದ ಬರುವಾಗ ನಮ್ಮ ಪಕ್ಷದ ರಾಜ್ಯ ಅಧ್ಯಕ್ಷರು ನಮ್ಮ ಜತೆ ಬರದೆ ಪ್ರತ್ಯೇಕವಾಗಿ ಬಂದರು. ಕೊನೆಗೆ ಕಾರ್ಯಕ್ರಮದಲ್ಲಿ ಪಕ್ಷ ಯಾವುದೇ ಒಂದು ವ್ಯಕ್ತಿ ಮತ್ತು ಜಾತಿ ಮೇಲೆ ನಿಂತಿಲ್ಲ ಎಂದು ನನ್ನ ಎದುರೇ ಭಾಷಣ ಮಾಡಿದರು. ಇದು ನಮ್ಮ ಅಧ್ಯಕ್ಷರು ನಮ್ಮ ಜತೆ ನಡೆದುಕೊಂಡ ರೀತಿ ಎಂದು ಈಶ್ವರಪ್ಪ ಹೆಸರು ಹೇಳದೆ ತರಾಟೆ ತೆಗೆದುಕೊಂಡರು.

ಆಪರೇಷನ್ ಕಮಲದಿಂದ ಪಕ್ಷ ಈ ಸ್ಥಿತಿಗೆ ಬಂದಿದೆ ಎಂದು ಹೇಳಿರುವ ರಾಜ್ಯ ಘಟಕದ ಅಧ್ಯಕ್ಷರಿಗೆ ತಾವು ಇದೇ ಸರ್ಕಾರದಲ್ಲಿ ಆಗ ನೀರಾವರಿ ಮತ್ತು ಇಂಧನ ಸಚಿವರಾಗಿದ್ದು ಮರೆತು ಹೋಯಿತು ಎಂದು ವ್ಯಂಗ್ಯವಾಡಿದರು. ಇಂದಿಗೂ ನನ್ನ ಜತೆ 75ಕ್ಕೂ ಹೆಚ್ಚು ಶಾಸಕರು, 10ಕ್ಕೂ ಹೆಚ್ಚು ಸಂಸತ್ ಸದಸ್ಯರು ಇದ್ದಾರೆ. ಆದರೆ, ತಪ್ಪೋ, ಸರಿಯೋ ಶೆಟ್ಟರನ್ನು ನಾನೇ ಮುಖ್ಯಮಂತ್ರಿ ಮಾಡಿದ್ದು. ಹಾಗಾಗಿ ಅವರು ಅವಧಿ ಪೂರೈಸಲಿ. ಅಲ್ಲಿಯವರೆಗೂ ಯಾರೂ ಬರಬೇಡಿ ಎಂದು ಅವರಿಗೆ ತಿಳಿಸಿದ್ದೇನೆ. ಡಿ.10 ರಂದು ಘೋಷಣೆಯಾಗುವ ನೂತನ ಪಕ್ಷದ ಕಾರ್ಯಕ್ರಮಕ್ಕೆ ಬಂದಾಗ ತಮ್ಮ ಸ್ಥಾನಗಳಿಂದ ಅವರನ್ನು ವಜಾಗೊಳಿಸಿದರೂ ಶೆಟ್ಟರ್ ಬೆಂಬಲ ವ್ಯಕ್ತಪಡಿಸಿ ಎಂದು ತಿಳಿಸಿದ್ದೇನೆ ಎಂದರು.

ಶಿವಮೊಗ್ಗ ಜಿಲ್ಲೆಯ ಪ್ರತಿ ತಾಲ್ಲೂಕಿಗೂ ಶೀಘ್ರದಲ್ಲೇ ಭೇಟಿ ನೀಡುತ್ತೇನೆ. ಪ್ರತಿ ತಾಲ್ಲೂಕಿನಲ್ಲೂ ಸುಮಾರು 2 ಸಾವಿರ ಜನರ ಸಭೆ ಕರೆದು, ಅಭಿಪ್ರಾಯ ಸಂಗ್ರಹಿಸುತ್ತೇವೆ. ಆಸಕ್ತರು ಭಾಗವಹಿಸಿ, ಸಲಹೆ-ಸೂಚನೆಗಳನ್ನು ಕೊಡಬಹುದು ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ತಿಳಿಸಿದರು.

ನನ್ನ ಜತೆ ಬನ್ನಿ: ಡಿ.10 ರಂದು ಘೋಷಣೆ ಮಾಡುವ ಪ್ರಾದೇಶಿಕ ಪಕ್ಷಕ್ಕೆ ಹಳೆಯ ಕಾರ್ಯಕರ್ತರೆಲ್ಲರೂ ಬಿಜೆಪಿ ವ್ಯಾಮೋಹ ತೊರೆದು ನನ್ನ ಜತೆ ಬನ್ನಿ, ಬದಲಾವಣೆ ತರೋಣ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.