ADVERTISEMENT

ಪತ್ನಿ ಮೇಲೆ ಹಲ್ಲೆ: ನಟ ದರ್ಶನ್ ಬಂಧನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 6:15 IST
Last Updated 9 ಸೆಪ್ಟೆಂಬರ್ 2011, 6:15 IST

ಬೆಂಗಳೂರು: ಪತ್ನಿ ವಿಜಯಲಕ್ಷ್ಮಿ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪದ ಮೇಲೆ ನಟ ದರ್ಶನ್ ಅವರನ್ನು ಶುಕ್ರವಾರ ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ವಿಜಯಲಕ್ಷ್ಮಿ ಅವರು ಶುಕ್ರವಾರ ಸಂಜೆ ವಿಜಯನಗರದಲ್ಲಿರುವ ತಮ್ಮ ಗೆಳತಿ ವಿದ್ಯಾ ಎಂಬುವವರ ಮನೆಗೆ ತೆರಳಿದ್ದರು.

~ಪಾನಮತ್ತ ದರ್ಶನ್ ಅವರು ವಿದ್ಯಾ ಮನೆಗೆ ಬಂದು ತಮ್ಮನ್ನು ಕರೆದುಕೊಂಡು ರಾಜ ರಾಜೇಶ್ವರಿ ನಗರದಲ್ಲಿರುವ ನಿವಾಸಕ್ಕೆ ಕರೆದೊಯ್ಯುವ ಸಮಯದಲ್ಲಿ ವಾಹನದಲ್ಲಿಯೇ ಮಾರಣಾಂತಿಕ ಹಲ್ಲೆ ನಡೆಸಿ, ರಿವಾಲ್ವರ್ ತೋರಿಸಿ ಕೊಲೆ ಬೆದರಿಕೆ ಹಾಕಿದರು~ ಎಂದು ವಿಜಯ ಲಕ್ಷ್ಮಿ ದೂರು ದಾಖಲಿಸಿದ್ದಾರೆ ಎಂದು ಪಶ್ಚಿಮ ವಲಯ ಡಿಸಿಪಿ ಸಿದ್ಧರಾಮಪ್ಪ ತಿಳಿಸಿದ್ದಾರೆ.

ಆದರೆ ದರ್ಶನ್ ಅವರು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ‘ತಾವು ವಿದ್ಯಾ ಮನೆಯಲ್ಲಿ ಪತ್ನಿ ಜತೆಯಲ್ಲಿದ್ದ ಮಗುವನ್ನು ವಾಹನದಲ್ಲಿ ತಿರುಗಾಡಿಸಲು ಕರೆದುಕೊಂಡು ಹೋಗಲು ಮುಂದಾದಾಗ ಮಗುವನ್ನು ನನ್ನೊಟ್ಟಿಗೆ ಕಳುಹಿಸಲು  ಅವಳು ನಿರಾಕರಿಸಿದಳು. ಕಾರಣ ಅವಳ ಮೇಲೆ ಕೈಯಿಂದ ಹಲ್ಲೆ ಮಾಡಿದೆ. ಮುಂದೇನಾಯಿತು ಗೋತ್ತಿಲ್ಲ, ಆ ಸಮಯದಲ್ಲಿ ತಾನು ಮದ್ಯಪಾನ ಮಾಡಿದ್ದು ನಿಜ’ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ ವಿಜಯ ನಗರದ ಗಾಯತ್ರಿ ಆಸ್ಪತ್ರೆಗೆ ದಾಖಲಾಗಿರುವ ವಿಜಯ ಲಕ್ಷ್ಮಿ ಅವರನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಅವರು ಭೇಟಿ ಮಾಡಿ ಘಟನೆ ಕುರಿತಂತೆ ಮಾಹಿತಿ ಪಡೆದು, ಅವರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ನಟ ದರ್ಶನ್ ಅವರು ಕಳೆದ ಒಂದು ವರ್ಷದಿಂದ ತಮಗೆ ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವಿಜಯ ಲಕ್ಷ್ಮಿ ತಿಳಿಸಿದರೆಂದೂ ಮಂಜುಳಾ ತಿಳಿಸಿದ್ದಾರೆ.

ದರ್ಶನ ಅವರನ್ನು ಬಂಧಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ವಿಜಯನಗರ ಪೊಲೀಸ್ ಠಾಣೆ ಎದುರು ಜಮಾಯಿಸಿ, ದರ್ಶನ್ ಅವರನ್ನು ಬಿಡುಗಡೆ ಮಾಡುವಂತೆ ದಾಂಧಲೆ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.