ಬೆಂಗಳೂರು: ‘ಶಾಸಕರ ತೇಜೋವಧೆ ಮಾಡುವ ಲೇಖನ ಪ್ರಕಟಿಸಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತರಾದ ರವಿ ಬೆಳಗೆರೆ ಬಿನ್ ಲಕ್ಷ್ಮಣ ರಾವ್ ಹಾಗೂ ಅನಿಲ್ ರಾಜ್ಗೆ (ಪ್ರಕಾಶ್) ಹಕ್ಕು ಬಾಧ್ಯತಾ ಸಮಿತಿ ವಿಧಿಸಿರುವ ಜೈಲು ಶಿಕ್ಷೆ ಹಾಗೂ ದಂಡದ ಆದೇಶ ಜಾರಿಗೆ ಹೈಕೋರ್ಟ್ ನಾಲ್ಕು ವಾರಗಳ ಮಧ್ಯಂತರ ತಡೆ ನೀಡಿದೆ. ಈ ಕುರಿತು ರವಿ ಬೆಳಗೆರೆ, ಅನಿಲ್ ರಾಜ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಶಾಸಕರಾದ ಕೆ.ಬಿ.ಕೋಳಿವಾಡ ಮತ್ತು ಎಸ್.ಆರ್.ವಿಶ್ವನಾಥ್ ಪರ ಹಾಜರಿದ್ದ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ‘ವಾದ ಮಂಡಿಸಲು ತಯಾರಿ
ದ್ದೇನೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಇಂದು ಸಮಯವಿಲ್ಲ, ಮುಂದಿನ ಆದೇಶದವರೆಗೆ ತಡೆಯಾಜ್ಞೆ ಇರುತ್ತದೆ’ ಎಂದು ನಿರ್ದೇಶಿಸಿತು. ಅರ್ಜಿಯಲ್ಲಿ ವಿಧಾನಸಭೆ ಸ್ಪೀಕರ್, ದೂರುದಾರ ಕೆ.ಬಿ.ಕೋಳಿವಾಡ, ಹಕ್ಕು ಬಾಧ್ಯತಾ ಸಮಿತಿ ಅಧ್ಯಕ್ಷ ಮತ್ತು ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.