ಚಿಕ್ಕಬಳ್ಳಾಪುರ: ‘ಬಿಜೆಪಿಯವರು ಮಾಡುತ್ತಿರುವುದು ಪರಿವರ್ತನೆಯಲ್ಲ, ದುರ್ವರ್ತನಾ ಯಾತ್ರೆ. ಇದೊಂದು ಚುನಾವಣಾ ಗಿಮಿಕ್. ಅಭಿವೃದ್ಧಿ ವಿರೋಧಿ ಯಾತ್ರೆ. ಅವರು ಯಾವ ನೈತಿಕತೆಯಿಂದ ಜನರ ಮುಂದೆ ಹೋಗುತ್ತಾರೆ ಎಂದು ಅರ್ಥವಾಗುತ್ತಿಲ್ಲ’ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿ ದುರಾಡಳಿತ ಮತ್ತು ಭ್ರಷ್ಟಾಚಾರದ ನೇತೃತ್ವ ವಹಿಸಿದ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋಗಿದ್ದು ಏನಾದರೂ ಇದ್ದರೆ ಅದು ಕರ್ನಾಟಕದಲ್ಲಿ ಮಾತ್ರ. ಬಿಜೆಪಿ ಅರ್ಧ ಜನ ಜೈಲಿಗೆ ಹೋಗಿದ್ದಾರೆ. ಅರ್ಧ ಜನ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರ ಅರ್ಥದಲ್ಲಿ ಜೈಲಿನಿಂದ ಹೊರಗೆ ಬರುವುದೇ ಪರಿವರ್ತನೆ ಇರಬಹುದು’ ಎಂದು ವ್ಯಂಗ್ಯವಾಡಿದರು.
‘ಬಿಜೆಪಿಯವರಿಗೆ ಅಧಿಕಾರ ಸಿಕ್ಕಿದಾಗ ರಾಜ್ಯದಲ್ಲಿ ಏನೇನು ಮಾಡಿದರು ಎನ್ನುವುದು ಜನ ಮರೆತಿಲ್ಲ. ಅಂತಹವರು ಪರಿವರ್ತನೆ ಮಾಡುವುದು ಏನಿದೆ? ಹೊಸ ಮುಖವಾದರೂ ಇದ್ದರೆ ಜನ ನೋಡುತ್ತಿದ್ದರು. ಜೈಲಿನಲ್ಲಿದ್ದು ಬಂದವರ ಪರಿವರ್ತನಾ ಯಾತ್ರೆಗೆ ಯಾರು ಹೋಗುತ್ತಾರೆ? ಯಡಿಯೂರಪ್ಪ ಅವರ ಮಾತಿಗೆ ಇವತ್ತು ಯಾರೂ ಬೆಲೆ ಕೊಡುವುದಿಲ್ಲ. ಅವರು ಮುಖ್ಯಮಂತ್ರಿಯಾಗುವ ಆಸೆಯ ಭ್ರಮೆ ಬಿಡಬೇಕು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.