ಬೆಂಗಳೂರು: ಕಳೆದ ತಿಂಗಳು ನಡೆದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಛಾಯಾ ಪ್ರತಿ ಪಡೆಯಲು ಹಾಗೂ ಮರು ಮೌಲ್ಯಮಾಪನ, ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ.
ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಕೇಂದ್ರಗಳ ಸೌಲಭ್ಯ ಇಲ್ಲದ ಜಿಲ್ಲೆಗಳ ವಿದ್ಯಾರ್ಥಿಗಳು ಕಾಲೇಜುಗಳಿಂದ ನಿಗದಿತ ಅರ್ಜಿ ಹಾಗೂ ಚಲನ್ ಪಡೆಯಬೇಕು ಅಥವಾ ಇಲಾಖೆಯ ವೆಬ್ಸೈಟ್ ಮೂಲಕವೂ ಡೌನ್ಲೋಡ್ ಮಾಡಿಕೊಳ್ಳಬಹುದು.
ಉತ್ತರ ಪತ್ರಿಕೆಯ ಛಾಯಾ ಪ್ರತಿಗೆ ಅರ್ಜಿ ಸಲ್ಲಿಸಲು ಮಂಗಳವಾರ (ಆ. 6 ) ಕೊನೆಯ ದಿನ. ಪ್ರತಿ ವಿಷಯದ ಛಾಯಾ ಪ್ರತಿಗೆ ರೂ 420 ಶುಲ್ಕ ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ನೀಡಿರುವ ವಿಳಾಸಕ್ಕೆ 15 ದಿನಗಳ ಒಳಗೆ ಛಾಯಾ ಪ್ರತಿಯನ್ನು ಕಳುಹಿಸಿಕೊಡಲಾಗುತ್ತದೆ.
ಮರು ಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಇದೇ 12 ಕೊನೆ ದಿನ. ಪ್ರತಿಯೊಂದು ವಿಷಯದ ಮರು ಮೌಲ್ಯಮಾಪನ ಶುಲ್ಕ ರೂ 1050. ಪ್ರತಿ ವಿಷಯದ ಮರು ಎಣಿಕೆ ಶುಲ್ಕ ರೂ 280. ಮರು ಮೌಲ್ಯಮಾಪನದಲ್ಲಿ ಐದು ಅಂಕಗಳವರೆಗೆ ಹೆಚ್ಚು - ಕಡಿಮೆಯಾದರೆ ಆ ಅಂಕಗಳನ್ನು ಪರಿಗಣಿಸುವುದಿಲ್ಲ.
ಆರು ಅಥವಾ ಅದಕ್ಕಿಂತ ಹೆಚ್ಚು ಅಂಕಗಳು ಕಡಿಮೆಯಾದರೆ, ಜಾಸ್ತಿಯಾದರೆ ಫಲಿತಾಂಶವನ್ನು ಪರಿಷ್ಕರಿಸಲಾಗುತ್ತದೆ. ಶುಲ್ಕವನ್ನು ವಾಪಸ್ ಮಾಡುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.