ಮೈಸೂರು: ‘ಏನಯ್ಯ ಪ್ರತಾಪ, ವಿರಾಟ್ ಕೊಹ್ಲಿ ರೀತಿ ಗಡ್ಡ, ಮೀಸೆ ಬಿಟ್ಟಿದ್ದೀಯ? ನಿನಗೆ ರಾಜಕೀಯದಲ್ಲಿ ಒಳ್ಳೆಯ ಭವಿಷ್ಯ ಇದೆ. ಏನೇನೋ ಮಾತನಾಡಿ ಹಾಳು ಮಾಡಿಕೊಳ್ಳಬೇಡ’
–ನಗರದ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿದ್ದ ಸಮಾರಂಭದಲ್ಲಿ ತಮಗೆ ಎದುರಾದ ಸಂಸದ ಪ್ರತಾಪಸಿಂಹ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರೀತಿಯಿಂದ ಹೇಳಿದ ಮಾತಿದು.
ಕಾಂಗ್ರೆಸ್ ಮುಖಂಡರಾದ ಮಂಜುಳಾ ಮಾನಸ ಅವರು ತಮ್ಮ ವಿರುದ್ಧ ಪೊಲೀಸ್ ಕಮಿಷನರ್ಗೆ ನೀಡಿರುವ ದೂರಿನ ವಿಚಾರವನ್ನು ಮುಖ್ಯಮಂತ್ರಿ ಬಳಿ ಸಿಂಹ ಪ್ರಸ್ತಾಪಿಸಿದರು. ‘ಏನ್ ಸರ್, ಪದೇಪದೇ ನನಗೆ ಬೈಯುತ್ತೀರಿ’ ಎಂದು ತಮಾಷೆಯಿಂದ ಹೇಳಿದರು.
ಮಂಜುಳಾ ಕೂಡ ಸ್ಥಳದಲ್ಲಿದ್ದರು. ಆಗ ಸಿದ್ದರಾಮಯ್ಯ, ‘ಮಂಜುಳಾಗೆ ಹೇಳುತ್ತೇನೆ ಬಿಡು. ಆದರೆ, ನೀನಿನ್ನೂ ಚಿಕ್ಕವ, ಹಾಗೆಲ್ಲಾ ಮಾತನಾಡಬೇಡ, ತಾಳ್ಮೆಯಿಂದ ಇರು. ಆಕ್ರಮಣಕಾರಿ ವರ್ತನೆ ತೋರಬೇಡ’ ಎಂದು ಕಿವಿಮಾತು ಹೇಳಿದರು. ಸಿಂಹ ಕೂಡ ಅಷ್ಟೇ ವಿನಮ್ರವಾಗಿ ಆಲಿಸಿದರು. ಕಾರ್ಯಕ್ರಮದಲ್ಲಿ ಒಟ್ಟಿಗೆ ವೇದಿಕೆ ಹಂಚಿಕೊಂಡರು. ‘ಸಿದ್ದರಾಮಯ್ಯ ಅವರು ಪ್ರೀತಿಯಿಂದ ಮೈದಡವಿ ನನಗೆ ಕೆಲ ಸಲಹೆ ನೀಡಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.