ಬೆಂಗಳೂರು: ಒಂದು ವಾರದ ರೆಸಾರ್ಟ್ ವಾಸದ ಬಳಿಕ ಬಿಜೆಪಿ ರಾಜ್ಯ ಘಟಕ ಈಗ ಬರ ಅಧ್ಯಯನಕ್ಕೆ ಹೊರಟಿದೆ.
ಪಕ್ಷದ ಎಲ್ಲ ಶಾಸಕರು ದೆಹಲಿಯಿಂದ ವಾಪಸ್ ಬರಬೇಕು ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶನಿವಾರ ಬೆಳಿಗ್ಗೆ ನಿರ್ದೇಶನ ನೀಡಿದರು. ಶಾಸಕರು ಕ್ಷೇತ್ರದಲ್ಲಿದ್ದು ಬರ ಸಮಸ್ಯೆಗೆ ಸ್ಪಂದಿಸಬೇಕು ಎಂದು ನಿರ್ದೇಶನ ನೀಡಿದರು. ಯಡಿಯೂರಪ್ಪ ನೇತೃತ್ವದ ಏಳು ನಾಯಕರ ತಂಡ ಬರಪೀಡಿತ ಜಿಲ್ಲೆಗಳಲ್ಲಿ ಸೋಮವಾರ ಹಾಗೂ ಮಂಗಳವಾರ ಪ್ರವಾಸ ಮಾಡಲಿದೆ. ತಂಡದಲ್ಲಿ ಎನ್.ರವಿಕುಮಾರ್, ಬಿ.ಎನ್.ಬಚ್ಚೇಗೌಡ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜಯದೇವ್, ಮರಿಸ್ವಾಮಿ, ವೆಂಕಟಮುನಿಯಪ್ಪ ಇದ್ದಾರೆ.
21ರಂದು ಬೆಳಿಗ್ಗೆ 11ಕ್ಕೆ ಮುಳಬಾಗಿಲಿನ ಕುರುಡುಮಲೈ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತಂಡವು ಕೋಲಾರ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ತೆರಳಲಿದೆ. ಅದೇ ದಿನ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಅಧ್ಯಯನ ನಡೆಸಲಿದೆ. ಜತೆಗೆ, ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆಗೆ ಸಭೆ ನಡೆಸಲಿದೆ. 22ರಂದು ಚಾಮರಾಜನಗರ, ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಮಾಡಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.