ADVERTISEMENT

ಬಳೆ ಅತ್ತಿಗುಪ್ಪೆ: ನಿಧಿ ಆಸೆಗೆ ದೇವರ ವಿಗ್ರಹ ಭಗ್ನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 19:30 IST
Last Updated 8 ಫೆಬ್ರುವರಿ 2012, 19:30 IST
ಬಳೆ ಅತ್ತಿಗುಪ್ಪೆ: ನಿಧಿ ಆಸೆಗೆ ದೇವರ ವಿಗ್ರಹ ಭಗ್ನ
ಬಳೆ ಅತ್ತಿಗುಪ್ಪೆ: ನಿಧಿ ಆಸೆಗೆ ದೇವರ ವಿಗ್ರಹ ಭಗ್ನ   

ಪಾಂಡವಪುರ: ದೇವಸ್ಥಾನದ ಗರ್ಭಗುಡಿಯಲ್ಲಿ ನಿಧಿಯಿದೆ ಎಂದು ನಂಬಿದ ದುಷ್ಕರ್ಮಿಗಳು ದೇವರ ಲಿಂಗ ಹಾಗೂ ಬಸವ ವಿಗ್ರಹವನ್ನು ಮೂಲ ಸ್ಥಳದಿಂದ ಕಿತ್ತು ಭಗ್ನಗೊಳಿಸಿರುವ ಘಟನೆ ತಾಲ್ಲೂಕಿನ ಬಳೆ ಅತ್ತಿಗುಪ್ಪೆಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಗ್ರಾಮದ ಹೊರವಲಯದ ಬಸವೇಶ್ವರ ದೇವಸ್ಥಾನದಲ್ಲಿನ ಲಿಂಗ ಹಾಗೂ ವಿಗ್ರಹವನ್ನು ಮೂಲ ಸ್ಥಳದಿಂದ ಹೊರಗೆ ತೆಗೆದಿದ್ದಾರೆ. ಲಿಂಗ ಪ್ರತಿಷ್ಠಾಪನೆಗೊಂಡ ಸ್ಥಳದಲ್ಲಿ ಸುಮಾರು 10 ಅಡಿ ಆಳದಷ್ಟು ಗುಂಡಿ ತೋಡಿದ್ದಾರೆ. ನಿಧಿಗಾಗಿ ಹಲವು ಗಂಟೆಗಳ ಕಾಲ ತೀವ್ರ ಶೋಧ ನಡೆಸಿದ್ದಾರೆ. ಆದರೆ ಅವರು ಭಾವಿಸಿದಂತೆ ನಿಧಿ ಸಿಗದೆ ಬರಿಗೈಲಿ ಹಿಂತಿರುಗಿದ್ದಾರೆ.

ಬಸವೇಶ್ವರ ದೇವಸ್ಥಾನದ ಮುಖ್ಯದ್ವಾರದ ಗೋಡೆಯು ಹಲವು ದಿನಗಳ ಹಿಂದೆಯೇ ಶಿಥಿಲಗೊಂಡಿತ್ತು. ಈ ಕಾರಣ ದೇವಸ್ಥಾನಕ್ಕೆ ಭಕ್ತರ ಪ್ರವೇಶ ತಡೆಯಲಾಗಿತ್ತು. `ಹಿಂದೆ ದೇವಸ್ಥಾನ ನಿರ್ಮಿಸುವಾಗ ಹುಣ್ಣಿಮೆಯ ದಿನ ಕಾಮಗಾರಿ ಆರಂಭಿಸಲಾಗುತ್ತಿತ್ತು. ಆ ವೇಳೆ ಪ್ರತಿಸ್ಠಾಪಿಸಿದ ವಿಗ್ರಹದ ಕೆಳಗೆ ಚಿನ್ನಾಭರಣ ಇಡುತ್ತಾರೆ ಎಂಬ ನಂಬಿಕೆ ಇದೆ. ಇದನ್ನು ನಂಬಿದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ನಿಧಿಯ ಆಸೆಗಾಗಿ ದೇವರ ಲಿಂಗ ಮತ್ತು ವಿಗ್ರಹ ವಿರೂಪಗೊಳಿಸಿದ್ದಾರೆ~ ಎಂದು ಗ್ರಾಮಸ್ಥರು `ಪ್ರಜಾವಾಣಿ~ಗೆ ತಿಳಿಸಿದರು. 

 ಉಪ ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್ ಹಾಗೂ ಪೊಲೀಸರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

`ಶಾಸಕತ್ವದಿಂದ ಅನರ್ಹಗೊಳಿಸಿ~
ಬೇಲೂರು:  ವಿಧಾನಸಭೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ಸೆಕ್ಸ್‌ಫಿಲಂ ವೀಕ್ಷಿಸಿದ ಮೂವರು ಮಾಜಿ ಸಚಿವರನ್ನು ಶಾಸಕತ್ವದಿಂದಲೇ ಅನರ್ಹಗೊಳಿಸುವಂತೆ ಒತ್ತಾಯಿಸಿ ಇಲ್ಲಿನ ವಿವಿಧ ಮಹಿಳಾ ಸಂಘಟನೆಗಳು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನಾ ಮೆರವಣಿಗೆ ನಡೆಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.