ರಾಮನಗರ: ‘ಐ.ಟಿ, ಅಧಿಕಾರಿಗಳು ಬಿಜೆಪಿ ಸೇರುವಂತೆ ಆಮಿಷ ಒಡ್ಡಿರುವ ವಿಚಾರಕ್ಕೆ ಸಂಬಂಧಿಸಿ ಸದ್ಯ ಏನನ್ನೂ ಪ್ರತಿಕ್ರಿಯಿಸಲಾರೆ. ಸೂಕ್ತ ಸಮಯದಲ್ಲಿ ಎಲ್ಲವನ್ನೂ ತಿಳಿಸುತ್ತೇನೆ’ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಶುಕ್ರವಾರ ಇಲ್ಲಿ ಪತ್ರಕರ್ತರಿಗೆ ಮುಖಾಮುಖಿಯಾದ ಅವರು, ಬಿಜೆಪಿ ಆಮಿಷ ಒಡ್ಡಿದ್ದು ಸುಳ್ಳೋ, ನಿಜವೋ ಎಂಬುದನ್ನು ಸ್ಪಷ್ಟಪಡಿಸಲಿಲ್ಲ. ‘ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಹೇಳಿಕೆಗಳು ಹಾಗೂ ಐ.ಟಿ. ಅಧಿಕಾರಿಗಳ ಸ್ಪಷ್ಟನೆಯನ್ನೂ ಗಮನಿಸಿದ್ದೇನೆ. ಆದರೆ ಸದ್ಯ ನಾನೇನೂ ಹೇಳಲಾರೆ. ಆದರೆ ನನ್ನ ರಾಜಕೀಯ ನಿಲುವಿನಲ್ಲಿ ಸದ್ಯ ಯಾವುದೇ ಬದಲಾವಣೆ ಇಲ್ಲ’ ಎಂದರು.
ಅಧಿವೇಶನದಲ್ಲಿ ನಿರ್ಣಯ ಮಂಡಿಸಿ: ‘ವಿಧಾನಸೌಧದ ವಜ್ರ ಮಹೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೇ ತಮ್ಮ ಭಾಷಣದಲ್ಲಿ ಟಿಪ್ಪುಸುಲ್ತಾನ್ ಅವರನ್ನು ಹಾಡಿ ಹೊಗಳಿದ್ದಾರೆ. ಅವರು ಮಾತನಾಡಿದ್ದು ತಪ್ಪು ಎಂದಾದರೆ ಬಿಜೆಪಿ ಶಾಸಕರು ರಾಷ್ಟ್ರಪತಿ ಭಾಷಣದ ವಿರುದ್ಧ ನಿರ್ಣಯ ಅಂಗೀಕರಿಸಿ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಿ’ ಎಂದು ಅವರು ಸವಾಲು ಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.