ADVERTISEMENT

ಬಿಜೆಪಿ ಭಿನ್ನಮತ ಸದ್ಯಕ್ಕೆ ಶಮನ

ರಾಜಕೀಯೇತರವಾಗಿ ಬ್ರಿಗೇಡ್‌ ಚಟುವಟಿಕೆ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2017, 19:51 IST
Last Updated 4 ಫೆಬ್ರುವರಿ 2017, 19:51 IST

ಬೆಂಗಳೂರು: ರಾಜಕೀಯೇತರ ಸಂಘಟನೆಯಾಗಿ ರಾಯಣ್ಣ ಬ್ರಿಗೇಡ್‌ ಮುಂದುವರಿಸಲು ನಿರ್ಧರಿಸಿದ್ದು, ಬಿಜೆಪಿ ಭಿನ್ನಮತ ಸದ್ಯಕ್ಕೆ ಶಮನವಾದಂತಿದೆ.

ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಮಧ್ಯೆ ಬುಸುಗುಡುತ್ತಿದ್ದ ಅಸಮಾಧಾನ ತಣಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರು ಸೂತ್ರ ರೂಪಿಸಿದ್ದರು.

ಯಡಿಯೂರಪ್ಪ, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ, ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಅರುಣಕುಮಾರ್‌ ಅವರನ್ನು ಒಳಗೊಂಡ ಬಿಕ್ಕಟ್ಟು ಪರಿಹಾರ ಸಮಿತಿ ರಚಿಸಿದ್ದರು.

ADVERTISEMENT

ರಾಜ್ಯ ಪದಾಧಿಕಾರಿಗಳು,  7ಕ್ಕೂ ಜಿಲ್ಲಾಧ್ಯಕ್ಷರು ಹಾಗೂ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಅವರನ್ನು ಬದಲಾವಣೆ ಮಾಡದೇ ಇದ್ದರೆ ಈಶ್ವರಪ್ಪ ಮತ್ತೆ ಸಿಡಿದೇಳಲಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬಂದಿದ್ದವು.

‘ಪಕ್ಷದಲ್ಲಿ ಎಲ್ಲರೂ ಒಂದಾಗಿದ್ದೇವೆ. ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ಅದೆಲ್ಲಾ ಊಹಾಪೋಹ. ಇರುವ ಸಣ್ಣ ಪುಟ್ಟ ಗೊಂದಲ ಬಗೆಹರಿಸುವ ಹೊಣೆಯನ್ನು ನಾಲ್ಕು ಜನರ ಸಮಿತಿಗೆ ವಹಿಸಲಾಗಿದೆ. ಜವಾಬ್ದಾರಿ ನಿರ್ವಹಿಸುವುದು ಬಿಡುವುದು ಸಮಿತಿಯ ವಿವೇಚನೆಗೆ ಬಿಟ್ಟಿದ್ದಾಗಿದೆ. ಈ ಬಗ್ಗೆ ನಾನು ಪ್ರಶ್ನಿಸಲು ಹೋಗುವುದಿಲ್ಲ’ ಎಂದು ಕೆ.ಎಸ್‌. ಈಶ್ವರಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದುಳಿದ ವರ್ಗಗಳ ಮೋರ್ಚಾದ ಉಸ್ತುವಾರಿ ವಹಿಸಿಕೊಂಡು ರಾಯಣ್ಣನವರ ಹೆಸರಿನಲ್ಲಿ ಜಿಲ್ಲಾ ಮಟ್ಟದಲ್ಲಿ ಸಮಾವೇಶ ನಡೆಸಲು ಅಮಿತ್‌ ಷಾ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ನಾನು ಕಾರ್ಯಪ್ರವೃತ್ತನಾಗಿದ್ದೇನೆ’ ಎಂದೂ ಅವರು ವಿವರಿಸಿದರು.

‘ರಾಯಣ್ಣ ಬ್ರಿಗೇಡ್‌ ಇನ್ನು ಮುಂದೆ ಯಾವುದೇ ರಾಜಕೀಯ ಚಟುವಟಿಕೆ ನಡೆಸುವುದಿಲ್ಲ. ಸಾಮಾಜಿಕ, ಶೈಕ್ಷಣಿಕ ಚಟುವಟಿಕೆ ನಡೆಸಲು ಮಾತ್ರ ಸೀಮಿತವಾಗಿರಲಿದೆ.  ಬ್ರಿಗೇಡ್‌ ಪ್ರಮುಖರು ಇದೇ 11ರಂದು  ಶಾಸಕರ ಭವನದಲ್ಲಿ ಸಭೆ ಕರೆದಿದ್ದಾರೆ.  ಪ್ರತಿ ಜಿಲ್ಲೆಯಿಂದ 4–5 ಪ್ರಮುಖರು ಭಾಗವಹಿಸಲಿದ್ದಾರೆ. ಸಭೆಯಲ್ಲಿ ನಾನೂ ಪಾಲ್ಗೊಳ್ಳಲಿದ್ದೇನೆ. ಬ್ರಿಗೇಡ್‌ ಮುಂದಿನ ಹೆಜ್ಜೆಗೆಳ ಕುರಿತು ಅಂದು ತೀರ್ಮಾನಿಸಲಾಗುವುದು’ ಎಂದು ಅವರು ಸ್ಪಷ್ಟಪಡಿಸಿದರು.

ಸಮಿತಿ ಸಭೆ ಇಲ್ಲ: ಬಿಕ್ಕಟ್ಟು ಪರಿಹರಿಸಲು ರಚಿಸಲಾಗಿರುವ ಸಮಿತಿ ಸಭೆ ಸೇರುವ ಪ್ರಶ್ನೆಯೇ ಇಲ್ಲ. ಅಂತಹ ಯಾವುದೇ ಚಿಂತನೆಯೂ ರಾಜ್ಯ ಅಧ್ಯಕ್ಷರ ಮುಂದೆ ಇಲ್ಲ ಎಂದು ಯಡಿಯೂರಪ್ಪ ಆಪ್ತರು ತಿಳಿಸಿದ್ದಾರೆ.

‘ದಾವಣಗೆರೆ, ತುಮಕೂರು, ಕೊಡಗು ಜಿಲ್ಲೆಗಳ ಸಂಘಟನೆ ಕುರಿತು ಕೆಲವು ಗೊಂದಲಗಳಿವೆ. ಮಾತುಕತೆ ಮೂಲಕ ಇದನ್ನು ಬಗೆಹರಿಸಿ ಎಂದಷ್ಟೇ ಅಮಿತ್‌ ಷಾ ಸೂಚಿಸಿದ್ದಾರೆ. ಆಯಾ ಜಿಲ್ಲೆಗಳ ಪ್ರಮುಖರನ್ನು ಮಾತುಕತೆಗೆ ಆಹ್ವಾನಿಸಿ ಗೊಂದಲ ನಿವಾರಿಸುವ ಚಿಂತನೆಯಿದೆ. ಅದಕ್ಕೆ ಯಾವುದೇ ಗಡುವು ಅಥವಾ ಕಾಲಮಿತಿಯಿಲ್ಲ’ ಎಂದು ಆಪ್ತ ಮೂಲಗಳು ತಿಳಿಸಿವೆ.

ಎರಡು ದೋಣಿಯಲ್ಲಿ ಕಾಲಿಟ್ಟ ಪರಮೇಶ್ವರ್‌: ಸಿ.ಟಿ. ರವಿ ಟೀಕೆ
ಜಿ. ಪರಮೇಶ್ವರ್‌ ಅವರು ಅತ್ತ ಕೆಪಿಸಿಸಿ ಅಧ್ಯಕ್ಷ ಹುದ್ದೆ,  ಇತ್ತ ಗೃಹ ಸಚಿವ ಸ್ಥಾನ ಹೀಗೆ ಎರಡು ದೋಣಿಯಲ್ಲಿ ಕಾಲಿಟ್ಟಿರುವುದರಿಂದ ಗೃಹ ಇಲಾಖೆ ನಿರ್ವಹಿಸುವಲ್ಲಿ ಸೋತಿದ್ದಾರೆ ಎಂದು  ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಟೀಕಿಸಿದ್ದಾರೆ.

ಎರಡೂ ಜವಾಬ್ದಾರಿ ನಿರ್ವಹಿಸುತ್ತಿರುವುದರಿಂದ ಯಾವುದಕ್ಕೂ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಇದು ಪ್ರಮುಖ ಕಾರಣ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಶನಿವಾರ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.