ಬೆಂಗಳೂರು: ಬಿಸಿಯೂಟ ನೌಕರರಿಗೆ ಕನಿಷ್ಟ ಗೌರವಧನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಈ ಸಂಬಂಧ ನೌಹೀರಾ ಶೇಖ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ನ್ಯಾಯಮೂರ್ತಿಗಳು, 'ಬಿಸಿಯೂಟ ನೌಕರರು ಬೇರೆಯವರಿಗೆ ಅಡುಗೆ ಮಾಡುತ್ತಾರೆ. ಅವರ ಊಟಕ್ಕೇ ನೀವು ಹಣ ನೀಡದಿದ್ದರೆ ಹೇಗೆ' ಎಂದು ಸರ್ಕಾರಿ ವಕೀಲರನ್ನು ಖಾರವಾಗಿ ಪ್ರಶ್ನಿಸಿದರು.
'ನೀವು ದನಿಯಿಲ್ಲದ ಜನರಿಗೆ ಅಪಮಾನ ಮಾಡುತ್ತಿದ್ದೀರಿ. ಗೌರವಧನವು ಗೌರವಯುತವಾಗಿಲ್ಲದಿದ್ದರೆ ಹೇಗೆ' ಎಂದರು.
'ಬಿಸಿಯೂಟ ಮಾಡುವುದೆಂದರೆ ಕುಕ್ಕರ್ ಕೂಗಿಸಿದಂತಲ್ಲ' ಎಂದು ಸರ್ಕಾರದ ಕ್ರಮಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.
'ಹೀಗೆಂದಾಕ್ಷಣ ನೌಕರರು ಮುಷ್ಕರ ಮಾಡುವುದನ್ನು ನಾವು ಸಮರ್ಥಿಸುವುದಿಲ್ಲ. ನ್ಯಾಯಯುತ ಗೌರವಧನ ನೀಡುವ ಕುರಿತು ಸರ್ಕಾರದ ನಿಲುವು ಏನೆಂಬುದನ್ನು 6 ವಾರಗಳಲ್ಲಿ ತಿಳಿಸಿ' ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.