ADVERTISEMENT

ಬೊಮ್ಮಾಯಿ, ಕತ್ತಿ ವಿಶ್ವಾಸ ದ್ರೋಹಿಗಳು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST

ಹಾವೇರಿ: `ಬಿಜೆಪಿಯ ವರ್ತನೆಗೆ ಬೇಸತ್ತು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನಿಷ್ಠನಾಗಿರುವ ನಾನು ಇದೇ 4ರಂದು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ' ಎಂದು ಶಿವರಾಜ ಸಜ್ಜನ ಸೋಮವಾರ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕೆಜೆಪಿ ಸೇರಿ, ವಿಧಾನಸಭಾ ಚುನಾವಣೆಯಲ್ಲಿ ಬ್ಯಾಡಗಿ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಅವರು ಸುದ್ದಿಗಾರರಿಗೆ ಹೇಳಿದರು.

ವಿಶ್ವಾಸ ದ್ರೋಹಿಗಳು:
`ಬಿಜೆಪಿ ಮುಳುಗುತ್ತಿರುವ ಹಡಗು. ಅಲ್ಲಿದ್ದ ಬಹುತೇಕ ಪ್ರಯಾಣಿಕರು ಹೊರ ಬರುತ್ತಿದ್ದಾರೆ. ಯಡಿಯೂರಪ್ಪನವರಿಗೆ ದ್ರೋಹ ಬಗೆದ ಬಸವರಾಜ್ ಬೊಮ್ಮಾಯಿ,  ಉಮೇಶ್ ಕತ್ತಿ ಅವರನ್ನು ಸೋಲಿಸುವುದೇ ನಮ್ಮ ಗುರಿಯಾಗಿದೆ.  ಮೂವರು ದ್ರೋಹಿಗಳ ವಿರುದ್ಧ ಕೆಜೆಪಿಯಿಂದ ಪ್ರಬಲ ಎದುರಾಳಿಗಳನ್ನು ಕಣಕ್ಕಳಿಸಲಾಗುವುದು. ಅವರನ್ನು ಸೋಲಿಸುವ ಮೂಲಕ ಅವರ ವಿಶ್ವಾಸ ದ್ರೋಹಕ್ಕೆ ತಕ್ಕಶಾಸ್ತಿ ಮಾಡಲಾಗುವುದು' ಎಂದರು.

ಒತ್ತಡ ಹೇರಿಲ್ಲ:
ಮಾಜಿ ಶಾಸಕ ಸುರೇಶಗೌಡರು ತಮ್ಮ ವೈಯಕ್ತಿಕ ಕಾರಣಕ್ಕಾಗಿ ಚುನಾವಣಾ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಅವರನ್ನು ಕಣದಿಂದ ಹಿಂದೆ ಸರಿಸಲು ಯಾರಿಂದಲೂ ಒತ್ತಡ ಹಾಕಿಸಿಲ್ಲ. ತಾವು ಸಹ ಆ ಕೆಲಸ ಮಾಡಿಲ್ಲ. ಸುರೇಶಗೌಡ ಪಾಟೀಲರು ಬಹಳ ವರ್ಷಗಳಿಂದ ಸ್ನೇಹಿತರಾಗಿದ್ದವರು. ಅವರ ಜತೆ ವೈಯಕ್ತಿಕ ಹಾಗೂ ರಾಜಕೀಯ ಸ್ನೇಹ ಚೆನ್ನಾಗಿಯೇ ಇದೆ. ಇದನ್ನು ಸಹಿಸದ ಕೆಲವರು ತಮ್ಮ ಹಾಗೂ ಸುರೇಶಗೌಡರ ನಡುವೆ ಭಿನ್ನಾಭಿಪ್ರಾಯ ತರುವ ದುರುದ್ದೇಶದಿಂದ ಅಂತಹ ವದಂತಿಗಳನ್ನು ಹರಡುತ್ತಿದ್ದಾರೆ ಎಂದು  ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.