ADVERTISEMENT

ಭಗವದ್ಗೀತೆ: ಕಾಂಗ್ರೆಸ್ ವಿರೋಧ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ಮಂಗಳೂರು:  `ಶಾಲೆಗಳಲ್ಲಿ ಭಗವದ್ಗೀತೆಯನ್ನು ಕಡ್ಡಾಯಗೊಳಿಸುವುದು ಸರಿಯಲ್ಲ. ಯಾರಿಗೆ ಬೇಕೋ ಅವರಿಗೆ ಮಾತ್ರ ಅದನ್ನು ಬೋಧಿಸುವಂತಹ ವ್ಯವಸ್ಥೆ ಜಾರಿಗೆ ಬರಬೇಕು. ಧರ್ಮಗ್ರಂಥಗಳು ಖಂಡಿತವಾಗಿಯೂ ಹಾನಿಕರವಲ್ಲ. ಅವುಗಳು ಉತ್ತಮ ಸಂದೇಶವನ್ನೇ ನೀಡುತ್ತಿವೆ. ಒಂದು ವೇಳೆ ಭಗವದ್ಗೀತೆಯನ್ನು ಕಡ್ಡಾಯಗೊಳಿಸಿದರೆ ಕುರಾನ್ ಮತ್ತು ಬೈಬಲ್‌ಗಳನ್ನು ಸಹ ಪಠ್ಯವಾಗಿ ಸೇರಿಸಬೇಕು~ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದರು.

ನಗರದಲ್ಲಿ ಸೋಮವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಗೆ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಸ್.ಈಶ್ವರಪ್ಪ ಅವರಿಗೆ ಸಂವಿಧಾನ ತಿಳಿದೂ ಇಲ್ಲ, ಸಂವಿಧಾನದ ಬಗ್ಗೆ ಗೌರವವೂ ಇಲ್ಲ, ತಲೆಯೇ ಇಲ್ಲದ ಹಾಗೆ ಅವರು ಮಾತನಾಡುತ್ತಿದ್ದಾರೆ ಎಂದು ಅವರು ಕುಟುಕಿದರು.

ಇದೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ”ಲೋಕಾಯುಕ್ತರನ್ನಾಗಿ ನ್ಯಾಯಮೂರ್ತಿ ಬನ್ನೂರುಮಠ ಅವರನ್ನೇ ನೇಮಿಸಬೇಕು ಎಂದು ಸರ್ಕಾರ ಹಠ ಹಿಡಿಯುತ್ತಿರುವುದರ ಹಿಂದೆ ಮಾಜಿ ಮುಖ್ಯಮಂತ್ರಿ ಮತ್ತು ಇತರ ಸಚಿವರ ಮೇಲಿನ ಹಗರಣಗಳನ್ನು ಮುಚ್ಚಿಹಾಕುವ ಹುನ್ನಾರ ಅಡಗಿದೆ ಎಂದು  ಆರೋಪಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಇರುವುದು ನಿಜ. ಅದನ್ನು ಬಗೆಹರಿಸುವುದಕ್ಕಾಗಿಯೇ ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಪ್ರತಿ ಜಿಲ್ಲೆಗೆ ತೆರಳಿ ಕಾರ್ಯಕರ್ತರ ಮನೋಭಾವ ತಿಳಿಯುವ, ಅವರಿಗೆ ಆತ್ಮವಿಶ್ವಾಸ ತುಂಬುವ  ಕಾರ್ಯವನ್ನು ಮಂಗಳೂರಿನ ಮೂಲಕ ಆರಂಭಿಸಿರುವುದಾಗಿ ಅವರು ತಿಳಿಸಿದರು.

ಎನ್‌ಸಿಪಿ ಸೇರುವುದಿಲ್ಲ: `ಎನ್‌ಸಿಪಿಗೆ ಸೇರುವ ಬಗ್ಗೆ ಕೆಲವು ಶಾಸಕರು ಮಾತನಾಡಿರುವುದು ನಿಜ. ಆದರೆ ಅವರೆಲ್ಲರನ್ನೂ ನಾನು ಭೇಟಿ ಮಾಡಿದ್ದೇನೆ.  ಅವರ ದುಮ್ಮಾನಗಳನ್ನು ತಿಳಿದುಕೊಂಡಿದ್ದೇನೆ. ಪಕ್ಷದ ಶಾಸಕರು ಯಾರೂ ಎನ್‌ಸಿಪಿ ಸೇರುವುದಿಲ್ಲ~ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂಧನ ಮಿಸ್ತ್ರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.