ರಾಯಚೂರು: ‘ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಬೆಂಬಲಿಸಿ, ಇಲ್ಲವೆ ಮಠಗಳನ್ನು ಬಿಡಿ ಎನ್ನುವ ಸಚಿವ ಎಂ.ಬಿ.ಪಾಟೀಲ ಹೇಳಿಕೆ ಅವರ ಸ್ಥಾನಕ್ಕೆ ತಕ್ಕುದ್ದಲ್ಲ' ಎಂದು ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
‘ಸಚಿವರೇ ಹೋರಾಟ ಮಾಡುತ್ತಿರುವುದು ಮತ್ತು ಚುನಾವಣೆ ಮುಂಚೆ ನಿರ್ಧಾರ ತಿಳಿಸಿ ಎನ್ನುತ್ತಿರುವುದನ್ನು ನೋಡಿದರೆ ಇದು ರಾಜಕೀಯ ಪ್ರೇರಿತ ಎನ್ನುವುದು ಗೊತ್ತಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.
‘ಲಿಂಗಾಯತ ಪ್ರತ್ಯೇಕ ಧರ್ಮದ ವಾದದಲ್ಲಿ ಹುರುಳಿಲ್ಲ. 40ಕ್ಕೂ ಹೆಚ್ಚು ಶರಣರು 200ಕ್ಕೂ ಹೆಚ್ಚು ವಚನಗಳಲ್ಲಿ ವೀರಶೈವ ಪದ ಉಲ್ಲೇಖಿಸಿದ್ದಾರೆ. ಆದರೆ, ಕೇವಲ ಎಂಟು ಶರಣರು 13 ವಚನಗಳಲ್ಲಿ ಲಿಂಗಾಯತ ಪದ ಬಳಸಿದ್ದಾರೆ. ಆದರೆ, ಬಸವಣ್ಣನವರ ಯಾವುದೇ ವಚನದಲ್ಲೂ ಲಿಂಗಾಯತ ಪದವಿಲ್ಲ. ಲಿಂಗಾಯತ ಎನ್ನುವ ಪದ ವೀರಶೈವದ ಅನ್ವರ್ಥವಾಗಿದೆ’ ಎಂದು ಅವರು ಹೇಳಿದರು.
‘ಸಮನ್ವಯ ಸಮಿತಿ ನಿರ್ಣಯ ಹೇಳುವವರೆಗೂ ಯಾವುದೇ ಹೇಳಿಕೆ ನೀಡಬಾರದು ಎಂದು ನಿರ್ಧರಿಸಲಾಗಿತ್ತು. ಆದರೆ, ಸಭೆ, ಸಮಾವೇಶಗಳಲ್ಲಿ ಈಗ ಬಹಿರಂಗ ಹೇಳಿಕೆ ನೀಡಲಾಗುತ್ತಿದೆ. ಹೀಗಾಗಿ ಸಮನ್ವಯ ಸಮಿತಿ ರಚನೆಯಾಗುವುದೇ ಎಂಬ ಸಂಶಯ ಮೂಡಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.