ADVERTISEMENT

ಮತ್ತೆ ನಾಲ್ಕು ಕಡೆ ಕಾಡಿಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

ಮೈಸೂರು: ಮೈಸೂರು, ಚಾಮರಾಜ­ನಗರ ಹಾಗೂ ಕೊಡಗು ಜಿಲ್ಲೆಗಳ ಕಾಡಲ್ಲಿ ಮಂಗಳವಾರ ಬೆಂಕಿ ಬಿದ್ದಿದೆ. ಅರಣ್ಯ ವಲಯದ ಸಿಬ್ಬಂದಿ ಹಾಗೂ ಅಗ್ನಿ­ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಎಚ್‌.ಡಿ. ಕೋಟೆ ವರದಿ: ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅಂತರಸಂತೆ ವನ್ಯ­ಜೀವಿ ವಲಯದ ಹೆಬ್ಬಾಳ ಗಸ್ತಿನಲ್ಲಿ ಮಂಗಳ­ವಾರ ಮಧ್ಯಾಹ್ನ ಸುಮಾರು 1 ಗಂಟೆ ಸಮಯದಲ್ಲಿ ಕಾಡಿನ ಬೆಂಕಿ ಕಾಣಿಸಿ­ಕೊಂಡಿದ್ದು, ಸುಮಾರು 40ರಿಂದ 50 ಎಕರೆ ಕಾಡು ಭಸ್ಮವಾಗಿದೆ.

ಅಂತರಸಂತೆ ವನ್ಯಜೀವಿ ವಲಯದ ಅರಣ್ಯಾಧಿಕಾರಿ ಪ್ರಶಾಂತ್‌ಕುಮಾರ್ ಪೈ, ಬಳ್ಳೆ ವನ್ಯಜೀವಿ ವಲಯದ ಅರಣ್ಯಾ­ಧಿ­ಕಾರಿ ಎ.ವಿ. ಸತೀಶ್ ಮತ್ತು ಎರಡು ವನ್ಯಜೀವಿ ವಲಯದ ಸಿಬ್ಬಂದಿ­ಯೊಂದಿಗೆ ಜಂಗಲ್ ಲಾಡ್ಜ್ಸ್, ಸೆರಾಯ್ ರೆಸಾಟರ್್ ಸಿಬ್ಬಂದಿ ಮತ್ತು ಗುಂಡ­ತ್ತೂರು ಹಾಗೂ ಮಳಲಿ ಗ್ರಾಮದ ಅನೇಕ ಗ್ರಾಮಸ್ಥರು ಬೆಂಕಿ ಆರಿ­ಸುವಿಕೆ­ಯಲ್ಲಿ ಕೈ ಜೋಡಿಸಿದ್ದರಿಂದ ಸಂಜೆ 5 ಗಂಟೆ ವೇಳೆಯಲ್ಲಿ ಬೆಂಕಿಯನ್ನು ತಹ­ಬಂದಿಗೆ ತರುವಲ್ಲಿ ಯಶಸ್ವಿ­ಯಾದರು. 

ಗೋಣಿಕೊಪ್ಪಲು ವರದಿ: ತಿತಿಮತಿ ಸಮೀಪದ ದೇವಮಚ್ಚಿ ಅಕ್ಕಿಮಾಳ ಅರಣ್ಯ ಪ್ರದೇಶಕ್ಕೆ ಮಂಗಳವಾರ ಬೆಂಕಿ ಬಿದ್ದಿದೆ. ಅಗ್ನಿಯ ಕೆನ್ನಾಲಿಗೆ ಭೀಕರ­ವಾಗಿದ್ದು, ಬೆಂಕಿಯ ಕಿಡಿಗಳು ಪಕ್ಕ­ದಲ್ಲಿದ್ದ ದನದ ಕೊಟ್ಟಿಗೆಯ ಮೇಲೆ ಬಿದ್ದು ಎರಡು ಕೊಟ್ಟಿಗೆಗಳು ಸುಟ್ಟು­ಹೋಗಿವೆ. ಪಕ್ಕದ ಮನೆಗೂ ಬೆಂಕಿ ಹರಡಿದ್ದು, ಸಾರ್ವಜನಿಕರು ಇದನ್ನು ನಂದಿ­ಸುವಲ್ಲಿ ಸಫಲರಾಗಿದ್ದಾರೆ.

ಅಕ್ಕಿಮಾಳದ ನಿವಾಸಿಗಳಾದ ಅಗಸ್ಟಿನ್‌ ಅವರ ಕೊಟ್ಟಿಗೆ ಬೆಂಕಿಯಿಂದ ಸಂಪೂರ್ಣವಾಗಿ ಸುಟ್ಟುಹೋಗಿದೆ. ಭಾಗ್ಯಮ್ಮ ಅವರ ಮನೆಗೆ ಬೆಂಕಿ ಹರ­ಡಿದ ಸಂದರ್ಭ ಟಾಟಾ ಕಾಫಿ ಸಂಸ್ಥೆ­ಯಿಂದ ಬಂದ 2 ನೀರಿನ ಟ್ಯಾಂಕರ್‌ಗಳು ಸಂಭ­ವಿಸಬಹುದಾಗಿದ್ದ ಹೆಚ್ಚಿನ ಅನಾಹುತವನ್ನು ತಪ್ಪಿಸಿವೆ.

ಅರಣ್ಯದ ಅಂಚಿನಲ್ಲಿರುವ ಮೂಡ­ಗದ್ದೆ ರಮೇಶ್‌ ಅವರ ಕಾಫಿ ತೋಟಕ್ಕೂ ಬೆಂಕಿ ಹರಡಿತ್ತು. ನಂತರ ಗೋಣಿ­ಕೊಪ್ಪಲಿನ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.

ಹುಣಸೂರು ವರದಿ: ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಅಂಟಿಕೊಂಡ ಕೆಲವು ಪ್ರದೇಶಗಳಲ್ಲಿ ಮಂಗಳವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿರುವ ವರದಿ ತಡವಾಗಿ ಬೆಳಕಿಗೆ ಬಂದಿದೆ.

ವೀರನಹೊಸಹಳ್ಳಿ ವಲಯಕ್ಕೆ ಸೇರಿದ ಗುರುಪುರ ಟಿಬೇಟನ್‌ ಪುನ­ರ್ವಸತಿ ಕೇಂದ್ರಕ್ಕೆ ಹೊಂದಿಕೊಂಡಿದ್ದ ಹುಲ್ಲುಗಾವಲು ಪ್ರದೇಶದಲ್ಲಿ ಮಂಗಳ­ವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಕಾರ್ಯ­ಪ್ರವೃತ್ತ­ರಾದ ವೀರನ­ಹೊಸ­ಹಳ್ಳಿ ವಲಯ ಅರಣ್ಯಾಧಿಕಾರಿ ರಾಜಪ್ಪ ಸಿಬ್ಬಂದಿ­ಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ಹತೋಟಿಗೆ ತಂದರು.

ಮತ್ತೊಂದು ಪ್ರಕರಣದಲ್ಲಿ ಮತ್ತಿ­ಗೋಡು ಅರಣ್ಯ ಪ್ರದೇಶಕ್ಕೆ ಹೊಂದಿ­ಕೊಂಡಿರುವ ಅಯ್ಯನಕೆರೆ ಹಾಡಿ ಭಾಗದ ಪ್ರಾದೇಶಿಕ ಅರಣ್ಯ ವಿಭಾಗಕ್ಕೆ ಸೇರಿದ ಕೋರ್‌ ಅರಣ್ಯ ಪ್ರದೇಶಕ್ಕೆ ಬೆಂಕಿ ತಗಲಿ ಅಂದಾಜು 10–15 ಎಕರೆ ಪ್ರದೇಶ ಸಂಪೂರ್ಣ ಭಸ್ಮಗೊಂಡಿದೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್‌ ವಿಜಯ­ಕುಮಾರ್‌, ಅಯ್ಯನಕೆರೆ ಹಾಡಿ ಪ್ರದೇಶಕ್ಕೆ ಸೇರಿದ ಅರಣ್ಯಕ್ಕೆ ಬೆಂಕಿ ಬಿದ್ದಿಲ್ಲ. ಆ ಪ್ರದೇಶ ಪ್ರಾದೇಶಿಕ ಅರಣ್ಯ ವಿಭಾಗಕ್ಕೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. 

ಗುಂಡ್ಲುಪೇಟೆ ವರದಿ: ಸೋಮವಾರ ರಾತ್ರಿ 8 ಗಂಟೆ ವೇಳೆಗೆ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲ­ಯದ ಕರಡಿಕಲ್ಲು ಗುಡ್ಡಕ್ಕೆ ಬೆಂಕಿ ಬಿದ್ದು, ಸುಮಾರು 3 ಎಕರೆ ಅರಣ್ಯ ಭಸ್ಮ­ಗೊಂಡಿತ್ತು. ವಲಯ ಅರಣ್ಯಾಧಿಕಾರಿ ಪರ­ಮೇಶ್‌ ಮತ್ತು ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಮದ್ದೂರು ಅರಣ್ಯ ವಲಯ ಕಚೇರಿಯಿಂದ ಸುಮಾರು 10 ಕಿ.ಮೀ. ದೂರ­ದಲ್ಲಿರುವ ಒಳಕಾಡಿನ ಎರೆದಿಬ್ಬದ ಬಳಿ ಸೋಮವಾರ ರಾತ್ರಿ ಕಾಣಿಸಿಕೊಂಡ ಬೆಂಕಿಗೆ 5 ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ. ಇಲ್ಲಿ ಬಿದಿರು ಬೆಳೆ­ದಿರದ ಕಾರಣ ಹೆಚ್ಚಿನ ಹಾನಿ ಸಂಭ­ವಿಸಿಲ್ಲ. ನೆರೆಯ ಗ್ರಾಮದ ದುಷ್ಕರ್ಮಿ­ಗಳು ಬೆಂಕಿ ಹಾಕಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಶಂಕಿಸಿದ್ದಾರೆ.

‘ಮದ್ದೂರು ಅರಣ್ಯ ವಲಯ ವ್ಯಾಪ್ತಿ­ಯಲ್ಲಿ ಬೆಂಕಿ ಕಾಣಿಸಿಕೊಂಡು ಸ್ವಲ್ಪ ಹಾನಿ­ಯಾಗಿದೆ. ಹೆಚ್ಚಿನ ಹಾನಿ ಸಂಭವಿಸಿಲ್ಲ. ಈ ಸ್ಥಳ ಹೊರತುಪಡಿಸಿ ಯಾವುದೇ ಪ್ರದೇಶದಲ್ಲಿ ಬೆಂಕಿ ಬಿದ್ದಿಲ್ಲ’ ಎಂದು ವಲಯಾರಣ್ಯಾಧಿಕಾರಿ ಟಿ.ಎ. ರತ್ನಪ್ರಭಾ ಖಚಿತಪಡಿಸಿದರು.

ಓಂಕಾರ ಅರಣ್ಯ ವಲಯ: ಓಂಕಾರ ಅರಣ್ಯದಲ್ಲಿ ಮಂಗಳವಾರ ಅಲ್ಪ ಪ್ರಮಾಣ­ದಲ್ಲಿ ಭೂಮಿ ಮಟ್ಟದ ಬೆಂಕಿ ಕಾಣಿಸಿ­ಕೊಂಡಿದೆ. ವಲಯ ಕಚೇರಿ ಸಮೀಪ ಇರುವ ಬೇಗೂರು–- ಹೆಡಿ­ಯಾಲ ರಸ್ತೆಯ ಪಾರ್ಶ್ವದಲ್ಲಿ ಕಿಡಿಗೇಡಿ­ಗಳು ಬೆಂಕಿ ಹಾಕಿರುವುದರಿಂದ ಕುರು­ಚಲು ಗಿಡಗಳು ಭಸ್ಮವಾದವು.  ತಕ್ಷಣ ಕಾರ್ಯ­ಪ್ರವೃತ್ತರಾದ ವಲಯ ಅರ­ಣ್ಯಾ­­ಧಿ­ಕಾರಿ ಸತೀಶ್ ಹಾಗೂ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶ್ವಸಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.