ADVERTISEMENT

ಮದಕರಿ‌ನಾಯಕರಿಗೆ ಅವಮಾನ ಮಾಡಿದ ಸಿದ್ದರಾಮಯ್ಯ: ಅಮಿತ್ ಶಾ ಆರೋಪ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 15:33 IST
Last Updated 27 ಮಾರ್ಚ್ 2018, 15:33 IST
ಅಮಿತ್ ಶಾ
ಅಮಿತ್ ಶಾ   

ಚಳ್ಳಕೆರೆ: ‘ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಿಪ್ಪುಸುಲ್ತಾನ್ ಜಯಂತಿ ನೆನಪಾಗುತ್ತದೆ. ಆದರೆ ವೀರ ಮದಕರಿನಾಯಕರ ಜಯಂತಿ ನೆನಪಾಗುವುದಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಟೀಕಿಸಿದರು.

ಬಿಜೆಪಿ ಪರಿಶಿಷ್ಟ ಪಂಗಡಗಳ ಮೋರ್ಚಾ ಮಂಗಳವಾರ ಹಮ್ಮಿಕೊಂಡಿದ್ದ ವಿಭಾಗ ಸಮಾವೇಶದಲ್ಲಿ, ‘ತಿಮ್ಮಣ್ಣ ನಾಯಕ, ಭರಮಣ್ಣ ನಾಯಕ,  ಮದಕರಿನಾಯಕರಂತಹ ವೀರರಿಗೆ ಜನ್ಮ ನೀಡಿದ ನಾಡಿದು. ಹೈದರಾಲಿ ವಿರುದ್ಧ ಹೋರಾಡಿದ ಮದಕರಿನಾಯಕ ಆದರ್ಶ ಅರಸ’ ಎಂದು ಶಾ ಬಣ್ಣಿಸಿದರು.

ಹೈದರಾಲಿ, ಟಿಪ್ಪುಸುಲ್ತಾನ್, ಬಹಮನಿ  ಸುಲ್ತಾನರನ್ನು ನೆನಪು‌ ಮಾಡಿಕೊಳ್ಳುವ ಮೂಲಕ ಸಿದ್ದರಾಮಯ್ಯ ಅವರು ಮದಕರಿನಾಯಕರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ADVERTISEMENT

ಅಲ್ಪ ಸಂಖ್ಯಾತರನ್ನು ಓಲೈಸುವ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ, ದಲಿತರು ಹಿಂದುಳಿದವರು ಹಾಗೂ ಆದಿವಾಸಿಗಳಿಗೆ ನಿರಂತರವಾಗಿ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.

ಆದಿವಾಸಿಗಳ ಹಣ ಅಲ್ಪಸಂಖ್ಯಾತರಿಗೆ: ಆದಿವಾಸಿಗಳಿಗೆ ಮೀಸಲಿಟ್ಟ ದುಡ್ಡನ್ನು ಕಿತ್ತುಕೊಂಡು ಅಲ್ಪಸಂಖ್ಯಾತರಿಗೆ ನೀಡುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಶಾ ಗಂಭೀರ ಆರೋಪ ಮಾಡಿದರು.

ರಾಜ್ಯ ಸರ್ಕಾರ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ₹530 ಕೋಟಿ ಕೊಟ್ಟಿದ್ದರೆ, ಆದಿವಾಸಿಗಳಿಗೆ ₹130 ಕೋಟಿ ಕೊಟ್ಟಿದೆ. ಕಳೆದ ಐದು ವರ್ಷಗಳಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮೀಸಲಿಡುವ ಮೊತ್ತ ಪ್ರತಿವರ್ಷ ಏರುತ್ತಲೇ ಇದೆ. ಆದರೆ, ಆದಿವಾಸಿಗಳಿಗೆ ನೀಡುತ್ತಿರುವ ಅನುದಾನದಲ್ಲಿ ಸ್ವಲ್ಪವೂ ಹೆಚ್ಚಳವಾಗಿಲ್ಲ ಎಂದು ಶಾ ಹೇಳಿದರು.

ಇಂದು ಸಿದ್ದರಾಮಯ್ಯ ಆಡಳಿತದ ಕೊನೆದಿನ. ಯಡಿಯೂರಪ್ಪ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು ಎಲ್ಲ ಅನ್ಯಾಯಗಳನ್ನು ಸರಿಪಡಿಸಲಿದೆ ಎಂದು ಅವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.