ಬೆಂಗಳೂರು: ಮುಂಬೈ– ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ 7.56 ಟಿಎಂಸಿ ಅಡಿ ನೀರು ಕೊಡಬೇಕೆಂಬ ರಾಜ್ಯದ ಮಧ್ಯಂತರ ಅರ್ಜಿಯನ್ನು ಮಹಾದಾಯಿ ನ್ಯಾಯಮಂಡಳಿ ತಿರಸ್ಕರಿಸಿದ ಬಳಿಕ ಗೋವಾ ಜತೆ ತೆರೆಮರೆಯಲ್ಲಿ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಿಕೊಳ್ಳಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ.
ಸಂಧಾನದ ಮೂಲಕ ಮಹಾದಾಯಿ ವಿವಾದ ಬಗೆಹರಿಸಿಕೊಳ್ಳಲು ಹೊರಗಿನ ವ್ಯಕ್ತಿಗಳ ಮೂಲಕ ಗೋವಾ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ರಾಜ್ಯ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ ‘ದೊಡ್ಡಣ್ಣ’ ಇದ್ದಂತೆ ಎಂದು ಗೋವಾದ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಹೇಳಿರುವ ಬೆನ್ನಲ್ಲೇ ಕರ್ನಾಟಕ ಸಂಧಾನದ ಮಾರ್ಗಗಳ ಮೊರೆ ಹೋಗಿದೆ.
‘ವಿವಾದ ಸೌಹಾರ್ದಯುತವಾಗಿ ಬಗೆಹರಿಯಬೇಕೆಂದು ಬಯಸುವ ಜನಪ್ರತಿನಿಧಿಗಳು ಗೋವಾದಲ್ಲೂ ಇದ್ದಾರೆ. ಅವರನ್ನು ಸಂಪರ್ಕಿಸಲು ರಾಜ್ಯ ಸರ್ಕಾರ ಹೊರಗಿನ ಕೆಲವು ವ್ಯಕ್ತಿಗಳನ್ನು ಬಳಸಿಕೊಂಡಿದೆ. ಈ ಪ್ರಯತ್ನ ಯಶಸ್ವಿಯಾದರೆ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಮೂಲಗಳು ಸ್ಪಷ್ಟಪಡಿಸಿವೆ.
‘ಪರಸ್ಪರ ಕೊಡು– ಕೊಳ್ಳುವ ಮೂಲಕ ಸಮಸ್ಯೆ ಪರಿಹಾರಕ್ಕೆ ಶ್ರಮಿಸಲಾಗುವುದು. ನಮಗೆ ನೀರು ಬೇಕು. ಅದಕ್ಕೆ ಪ್ರತಿಯಾಗಿ ಅವರಿಗೆ ರಾಜ್ಯದಿಂದ ವಿದ್ಯುತ್ ಪೂರೈಸಬಹುದು. ಮಾತುಕತೆಗೆ ಕುಳಿತಾಗ ಬೇಕು– ಬೇಡಗಳ ಬಗ್ಗೆ ಚರ್ಚಿಸಬಹುದು’ ಎನ್ನಲಾಗಿದೆ.
ನಾರಿಮನ್ ಜೊತೆ ಮಾತುಕತೆ: ನ್ಯಾಯಮಂಡಳಿ ತನ್ನ ಮಧ್ಯಂತರ ಆದೇಶದಲ್ಲಿ ರಾಜ್ಯದ ಕುರಿತು ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಈ ಬಗ್ಗೆ ರಾಜ್ಯದ ಪರ ವಕೀಲರ ತಂಡದ ಮುಖ್ಯಸ್ಥ ಫಾಲಿ ಎಸ್. ನಾರಿಮನ್ ಅವರ ಜೊತೆ ಬುಧವಾರ ಚರ್ಚೆ ನಡೆಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
ನ್ಯಾಯಮಂಡಳಿ ಎತ್ತಿರುವ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡುವುದಕ್ಕೆ ಕಾನೂನು ತಜ್ಞರು, ಜಲತಜ್ಞರು, ಸಾಗರ ತಜ್ಞರು, ವನ್ಯಜೀವಿ ತಜ್ಞರು, ಹವಾಮಾನ ಬದಲಾವಣೆ ವಿಜ್ಞಾನಿಗಳ ಜೊತೆ ಸಚಿವರು ಮಂಗಳವಾರ ಬೆಂಗಳೂರಿನಲ್ಲಿ ಸಭೆ ನಡೆಸಿದರು.
ನ್ಯಾಯಮಂಡಳಿಯಿಂದ ಅಂತಿಮ ತೀರ್ವು ಬರುವಾಗ ರಾಜ್ಯಕ್ಕೆ ಅನ್ಯಾಯ ಆಗಬಾರದು. ಅಲ್ಲದೆ, ನ್ಯಾಯಮಂಡಳಿಗೆ ಈ ಜಲ ವಿವಾದದ ಬಗ್ಗೆ ಹಲವು ತಪ್ಪು ತಿಳಿವಳಿಕೆಗಳಿರುವುದು ಮಧ್ಯಂತರ ತೀರ್ಪಿನಿಂದ ಬೆಳಕಿಗೆ ಬಂದಿದೆ. ಅದನ್ನು ಸರಿಪಡಿಸುವುದೂ ನಮ್ಮ ಕರ್ತವ್ಯ ಎಂದು ಪಾಟೀಲ ತಿಳಿಸಿದರು.
ನಾರಿಮನ್ ಅವರು ಮಧ್ಯಂತರ ಅರ್ಜಿ ಸಲ್ಲಿಸುವುದು ಬೇಡ ಎಂದೇ ಹೇಳಿದ್ದರು. ಆದರೆ, ಕುಡಿಯುವ ನೀರಿನ ಉದ್ದೇಶಕ್ಕಾಗಿ ಅರ್ಜಿ ಸಲ್ಲಿಸುವುದರಿಂದ ಯಾವುದೇ ವ್ಯತಿರಿಕ್ತ ಪರಿಣಾಮ ಆಗಲಾರದು ಎಂಬ ಕಾರಣಕ್ಕೆ ಎಲ್ಲ ಪಕ್ಷಗಳೂ ಸೇರಿಕೊಂಡು ಮಧ್ಯಂತರ ಅರ್ಜಿ ಸಲ್ಲಿಸಬೇಕೆಂಬ ತೀರ್ಮಾನಕ್ಕೆ ಬರಲಾಯಿತು. ಆದರೆ, ವ್ಯತಿರಿಕ್ತ ಆದೇಶ ಬರುತ್ತದೆ ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ ಎಂದು ಪಾಟೀಲ ನುಡಿದರು.
ನಾಲ್ಕು ಜಿಲ್ಲೆಗಳು ಬರಗಾಲಕ್ಕೆ ತುತ್ತಾಗಿದ್ದರಿಂದ ಕುಡಿಯಲು ನೀರಿಲ್ಲದ ಕಾರಣ 7.56ಟಿಎಂಸಿ ಅಡಿ ನೀರು ತಾತ್ಕಾಲಿಕವಾಗಿ ಪಡೆಯಲು ಮಧ್ಯಂತರ ಅರ್ಜಿ ಸಲ್ಲಿಸಲಾಗಿತ್ತು ಎಂದು ಹೇಳಿದರು.
ಅಂತಿಮ ತೀರ್ಪಿನಲ್ಲಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಳ್ಳಲು ನ್ಯಾಯಮಂಡಳಿಗೆ ಇರಬಹುದಾದ ತಪ್ಪು ತಿಳಿವಳಿಕೆಯನ್ನು ದೂರ ಮಾಡುವುದು ಅನಿವಾರ್ಯ. ತಪ್ಪು ತಿಳಿವಳಿಕೆಗಳನ್ನು ಪಟ್ಟಿ ಮಾಡಿ ಉತ್ತರ ಸಿದ್ಧಪಡಿಸಿಕೊಂಡು ಬರುವಂತೆ ನಾರಿಮನ್ ಸಲಹೆ ಮಾಡಿದ್ದಾರೆ ಎಂದೂ ಸಚಿವರು ವಿವರಿಸಿದರು.
ಪ್ರಧಾನಿಗೆ ಪತ್ರ: ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಮನವಿ ಮಾಡಿ ಪ್ರಧಾನಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.