ADVERTISEMENT

ಮಾಗೋಡು: ಬಲೆಗೆ ಬಿದ್ದ ಚಿರತೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 19:30 IST
Last Updated 14 ಜೂನ್ 2011, 19:30 IST

ಅರಕಲಗೂಡು: ಕಾಡುಹಂದಿ ಹಿಡಿಯಲು ಇಡಲಾಗಿದ್ದ ಬಲೆಗೆ ಚಿರತೆಯೊಂದು ಸಿಕ್ಕಿಹಾಕಿಕೊಂಡ ಘಟನೆ ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿ ಮಾಗೋಡು ಗ್ರಾಮದ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಗ್ರಾಮದ ಹೊರವಲಯದ ಅರಣ್ಯದಲ್ಲಿ ಚಿರತೆ ಬಲೆಗೆ ಸಿಕ್ಕಿಕೊಂಡ ಸುದ್ದಿ ಬೆಳಿಗ್ಗೆ 7ಗಂಟೆಗೆ ಗ್ರಾಮಸ್ಥರಿಗೆ ತಿಳಿಯಿತು. ಮಾಗೋಡು ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರು ಸುರಿವ ಮಳೆಯನ್ನೂ ಲೆಕ್ಕಿಸದೆ ಚಿರತೆ ನೋಡಲು ಜಮಾಯಿಸಿದ್ದರು. ಜನರ ಗುಂಪು ಹಾಗೂ ಚೀರಾಟ ಕಂಡು ಬೆದರಿದ ಚಿರತೆ ಉರುಳಿನಿಂದ ಹೊರ ಬರಲು ತೀವ್ರ ಪ್ರಯತ್ನ ನಡೆಸಿತು. ಹೊರ ಬರಲು ಸಾಧ್ಯವಾಗದೆ ನೋವಿನಿಂದ ನಿತ್ರಾಣಗೊಂಡು ಸುಸ್ತಾಯಿತು.

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿ ಗ್ರಾಮಸ್ಥರನ್ನು ಚದುರಿಸಿ ಚಿರತೆ ರಕ್ಷಣೆಗೆ ಮುಂದಾದರು. ಮಂಗಳವಾರ ರಾತ್ರಿ 7ಗಂಟೆ  ಹೊತ್ತಿಗೆ ಮೈಸೂರು ಮೃಗಾಲಯದಿಂದ ಬಂದ ಪಶು ವೈದ್ಯರು ಅರಿವಳಿಕೆ ನೀಡಿದ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಬೋನಿಗೆ ಬೀಳಿಸುವಲ್ಲಿ ಯಶಸ್ವಿಯಾದರು.

ADVERTISEMENT

ಸಬ್ ಇನ್ಸ್‌ಪೆಕ್ಟರ್ ಜಯರಾಮೇಗೌಡ, ಆರ್‌ಎಫ್‌ಓ ರಾಜಪ್ಪ ಕಾರ್ಯಾಚರಣೆ ಉಸ್ತುವಾರಿ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.