ADVERTISEMENT

ಮಾಧ್ಯಮದವರ ಮೇಲಿನ ಹಲ್ಲೆ ಪ್ರಕರಣ: ಆಂತರಿಕ ತನಿಖೆ ರದ್ದತಿ ಕೋರಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:10 IST
Last Updated 19 ಮಾರ್ಚ್ 2012, 19:10 IST

ಬೆಂಗಳೂರು: ವಕೀಲರು, ಮಾಧ್ಯಮದವರು ಹಾಗೂ ಪೊಲೀಸರ ನಡುವೆ ಇದೇ 2ರಂದು ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದಿರುವ ಜಟಾಪಟಿಗೆ ಸಂಬಂಧಿಸಿದಂತೆ ಆಂತರಿಕ ತನಿಖೆ ನಡೆಸಲು ಡಿಜಿಪಿ (ಸಿಐಡಿ) ರೂಪಕ್‌ಕುಮಾರ್ ದತ್ತ ಅವರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್.ಜಿ. ವೈದ್ಯನಾಥನ್ ಅವರನ್ನು ತನಿಖೆ ನಡೆಸಲು ನೇಮಕ ಮಾಡಿರುವಾಗ, ಅದೇ ಪ್ರಕರಣದ ತನಿಖೆಗೆ  ದತ್ತ ಅವರನ್ನು ನೇಮಕ ಮಾಡಿರುವುದು ಕಾನೂನು ಬಾಹಿರ ಎಂದು ದೇವನಹಳ್ಳಿ ಉಪ ವಿಭಾಗದ ಎಸಿಪಿ ಪೀರಪ್ಪ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿದಾರರ ದೂರೇನು?: `ಘಟನೆ ನಡೆದ ದಿನವೇ ದತ್ತ ಅವರನ್ನು ನೇಮಕ ಮಾಡಲಾಗಿದೆ. ನಂತರ 9ರಂದು ನ್ಯಾ. ವೈದ್ಯನಾಥನ್ ಆಯೋಗ ನೇಮಕಗೊಂಡಿದೆ. ನ್ಯಾ. ವೈದ್ಯನಾಥನ್ ಆಯೋಗ ನೇಮಕ ಮಾಡಿದ ತಕ್ಷಣ ದತ್ತ ಅವರ ನೇಮಕವನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕಿತ್ತು. ಆದರೆ ಈ ರೀತಿ ಮಾಡಿಲ್ಲ~ ಎನ್ನುವುದು ಅರ್ಜಿದಾರರ ದೂರು.

`ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ವಿಚಾರಣೆ ನಡೆದರೆ ಅದು ಗೊಂದಲಕ್ಕೆ ಆಸ್ಪದ ಮಾಡುತ್ತದೆ. ಅಷ್ಟೇ ಅಲ್ಲದೇ, ಸುಪ್ರೀಂಕೋರ್ಟ್ ಹಾಗೂ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪುಗಳ ಅನ್ವಯ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾದರೆ ಅದರ ವಿಚಾರಣೆ ನಡೆಸುವ ಅಧಿಕಾರ ಮಾತ್ರ ಸಿಐಡಿಗೆ ಇದೆಯೇ ವಿನಾ ಯಾವುದೇ ಪ್ರಕರಣದ ತನಿಖೆ ನಡೆಸಲು ಅದಕ್ಕೆ ಅಧಿಕಾರ ಇಲ್ಲ.

ಆದರೆ ಈ ಎಲ್ಲ ತೀರ್ಪುಗಳನ್ನು ಸರ್ಕಾರ ಉಲ್ಲಂಘಿಸಿದೆ~ ಎಂದು ಅವರು ತಿಳಿಸಿದ್ದಾರೆ. ಸದ್ಯ ದತ್ತ ಅವರ ನೇಮಕಕ್ಕೆ ತಡೆ ನೀಡಲು ನಿರಾಕರಿಸಿದ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರು, ವಿಚಾರಣೆಯನ್ನು ಮುಂದೂಡಿದರು.

ಜಗದೀಶ ಶೆಟ್ಟರ್ ವಿರುದ್ಧ ಅರ್ಜಿ
ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಸಚಿವ ಜಗದೀಶ ಶೆಟ್ಟರ್ ಅವರ ಶಿಫಾರಸಿನ ಮೇರೆಗೆ ನಡೆದಿದೆ ಎನ್ನಲಾದ ಸಮೀಕ್ಷೆಯನ್ನು ರದ್ದು ಮಾಡಿರುವ ಹೈಕೋರ್ಟ್, ಹೊಸದಾಗಿ ಸಮೀಕ್ಷೆ ನಡೆಸುವಂತೆ ಗಣಿ ಇಲಾಖೆಗೆ ಸೋಮವಾರ ಆದೇಶಿಸಿದೆ.

ಹುಬ್ಬಳ್ಳಿ ಬಳಿ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದ ವಿವಾದ ಇದು. ಶೆಟ್ಟರ್ ಹಾಗೂ ಸರ್ಕಾರದ ವಿರುದ್ಧ ಜಿ.ಸಿ.ಪಾಟೀಲ್ ಎನ್ನುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸಿತು.
2007ರಿಂದ 2012ರವರೆಗೆ ಪಾಟೀಲ್ ಅವರಿಗೆ ಗಣಿಗಾರಿಕೆಗೆ ಅನುಮತಿ ನೀಡಲಾಗಿತ್ತು.

ಆದರೆ ರಾಜಕೀಯವಾಗಿ ಪ್ರಭಾವಿ ವ್ಯಕ್ತಿಯಾಗಿರುವ ಎಸ್.ಐ. ಚಿಕ್ಕನಗೌಡರ್ ಎನ್ನುವವರಿಗೆ ಗಣಿಗಾರಿಕೆಗೆ ಅವಕಾಶ ಕಲ್ಪಿಸಲು ಶೆಟ್ಟರ್ ಅವರ ಶಿಫಾರಸು ಬಳಸಿ ಗಣಿ ಇಲಾಖೆ ಅಧಿಕಾರಿಗಳು ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದಾರೆ ಎನ್ನುವುದು ಅರ್ಜಿದಾರರ ದೂರು.

`ನನಗೆ ನೀಡಿರುವ ಅನುಮತಿಯನ್ನು ರದ್ದು ಮಾಡಿ, ಚಿಕ್ಕನಗೌಡರಿಗೆ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಇದರಿಂದ ನನಗೆ ಕೋಟ್ಯಂತರ ರೂಪಾಯಿ ನಷ್ಟ ಆಗಿದೆ~ ಎಂದು ಅರ್ಜಿದಾರರು ದೂರಿದ್ದರು. ಈ ವಾದವನ್ನು ಪೀಠ ಮಾನ್ಯ ಮಾಡಿತು. ಹೊಸದಾಗಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಪೀಠ ಆದೇಶಿಸಿದೆ.

ಹದಿನೈದು ದಿನಗಳಲ್ಲಿ ಚುನಾವಣೆ
ಕರ್ನಾಟಕ ವೈದ್ಯಕೀಯ ಪರಿಷತ್ತಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇನ್ನು 15 ದಿನಗಳಲ್ಲಿ ಚುನಾವಣೆ ನಡೆಸುವಂತೆ ಹೈಕೋರ್ಟ್ ಸೋಮವಾರ ಆದೇಶಿಸಿದೆ.

ಪರಿಷತ್ತಿನ ಚುನಾವಣೆ ನಡೆದು ಆರು ತಿಂಗಳು ಕಳೆದರೂ ಇದುವರೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಮಾಡಲು ಪರಿಷತ್ತು ಮೀನಮೇಷ ಎಣಿಸುತ್ತಿದೆ ಎಂದು ದೂರಿ ಡಾ.ಎಚ್.ಎನ್.ರವೀಂದ್ರ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಈ ಆದೇಶ ಹೊರಡಿಸಿದರು.

`1992-93ರ ಅವಧಿಯ ನಂತರ ಇದುವರೆಗೂ ಪರಿಷತ್ತಿಗೆ ಚುನಾವಣೆ ನಡೆದಿರಲಿಲ್ಲ. ಆದರೆ ಇದೇ ರೀತಿಯ ಇನ್ನೊಂದು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ ನಂತರ ಎಚ್ಚೆತ್ತುಕೊಂಡ ಪರಿಷತ್ತು ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆಸಿದೆ. ಆದರೆ ಇದುವರೆಗೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿಲ್ಲ. ಈ ಬಗ್ಗೆ ಪರಿಷತ್ತಿನ ಗಮನ ಸೆಳೆದರೂ ಪ್ರಯೋಜನ ಆಗಿಲ್ಲ~ ಎಂದು ಅರ್ಜಿದಾರರು ದೂರ್ದ್ದಿದರು. ಇದನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದ್ದಾರೆ.
 

ಬಿಬಿಎಂಪಿ ಅವ್ಯವಹಾರ
ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿಯಲ್ಲಿ 2005ರಿಂದ ನಡೆದಿದೆ ಎನ್ನಲಾದ  ಅವ್ಯವಹಾರಗಳ ತನಿಖೆಯನ್ನು ಮೂರು ವಿಭಾಗಗಳಿಗೆ ಮಾತ್ರ ಸೀಮಿತಗೊಳಿಸಿರುವ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ರಾಜರಾಜೇಶ್ವರಿ ನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ಎಂಜಿನಿಯರಿಂಗ್ ವಿಭಾಗಗಳಲ್ಲಿನ ಅವ್ಯವಹಾರ ಮಾತ್ರ ಸಿಐಡಿ ತನಿಖೆಗೆ ವಹಿಸಿರುವುದು ಸರಿಯಲ್ಲ ಎನ್ನುವುದು ಕೆ.ರಮೇಶ್ ಹಾಗೂ ಇತರರ ವಾದ. ಅವ್ಯವಹಾರವು ಎಲ್ಲ 28 ವಿಭಾಗಗಳಲ್ಲಿಯೂ ನಡೆದಿದೆ. ಆದುದರಿಂದ ಸಂಪೂರ್ಣ ತನಿಖೆ ನಡೆಸಲು ಸಿಐಡಿಗೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರತಿವಾದಿಯಾಗಿರುವ ಸರ್ಕಾರ, ಬಿಬಿಎಂಪಿ ಹಾಗೂ ಸಿಐಡಿಗೆ ನೋಟಿಸ್ ಜಾರಿಗೆ ಆದೇಶಿಸಿರುವ ಕೋರ್ಟ್, ವಿಚಾರಣೆ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT