ಶಿವಮೊಗ್ಗ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತದಾನ ಮಾಡಿದ ಗುರುತು ಇನ್ನೂ ಮಾಸಿಲ್ಲ. ಎಡಗೈ ತೋರುಬೆರಳಿನ ಮೇಲೆ ಮೂಡಿಸಿದ ಶಾಯಿ (ಮಸಿ) ಗುರುತು ಈಗಲೂ ಅಳಿಸಿಲ್ಲ. ಅಷ್ಟರಲ್ಲೇ ವಿಧಾನಸಭಾ ಚುನಾವಣೆ ಬಂದಿದೆ. ಈ ಸಲ ಯಾವ ಬೆರಳಿಗೆ ಗುರುತು ಹಾಕಬೇಕು ಎನ್ನುವುದರ ಬಗ್ಗೆ ಇದುವರೆಗೂ ಚುನಾವಣಾ ಆಯೋಗ ಸ್ಪಷ್ಟ ಆದೇಶ ಹೊರಡಿಸಿಲ್ಲ. ಹಾಗಾಗಿ, ಮತದಾರರ ಜತೆಗೆ ಚುನಾವಣಾ ಸಿಬ್ಬಂದಿ ಕೂಡ ಗೊಂದಲಕ್ಕೆ ಒಳಗಾಗಿದ್ದಾರೆ.
ಮತದಾನ ಮಾಡಿದ್ದಕ್ಕೆ ಎಡಗೈನ ತೋರುಬೆರಳಿಗೆ ಶಾಯಿ ಗುರುತು ಹಾಕುವುದು ಚುನಾವಣಾ ಆಯೋಗದ ನಿಯಮ. ಇದೇ ಮಾ. 7ರಂದು 207 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಸುಮಾರು 55.46 ಲಕ್ಷ ಜನ ಮತದಾನ ಮಾಡಿದ್ದಾರೆ. ಅವರೆಲ್ಲರ ಬೆರಳಿಗೆ ಈ ಗುರುತು ಬಿದ್ದಿದೆ.
`ಚುನಾವಣಾ ಆಯೋಗ ಈ ಬಾರಿ ನಕಲಿ ಮತದಾನ ತಡೆಗೆ ಜೈಲು ಶಿಕ್ಷೆ ಮತ್ತಿತರ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಮತದಾನ ಕೇಂದ್ರಕ್ಕೆ ಹೋದಾಗ ಶಾಯಿ ಗುರುತು ಇರುವ ನಮ್ಮನ್ನೇ ನಕಲಿ ಮತದಾನಕ್ಕೆ ಬಂದಿದ್ದಾರೆಂದು ಆರೋಪಿಸಿ, ಚುನಾವಣಾ ಸಿಬ್ಬಂದಿ ಪೊಲೀಸರ ಕೈಗೆ ಒಪ್ಪಿಸಿದರೆ ಗತಿ ಏನು?' ಎಂದು ಪ್ರಶ್ನಿಸುತ್ತಾರೆ ಶಿವಮೊಗ್ಗ ನಗರದ ಕೆ.ವೈ. ನಾಗಚಂದ್ರ. ಈಗ ಮತದಾನ ಕೇಂದ್ರಕ್ಕೆ ಮತ ಚಲಾವಣೆಗೆ ಬರುವವರು ಹಿಂದೆ-ಮುಂದೆ ನೋಡು ವಂತಾಗಿದೆ. ಆಯೋಗ ಈ ಗೊಂದಲ ಪರಿಹರಿಸಬೇಕು ಎಂದು ಆಗ್ರಹಿಸುತ್ತಾರೆ ರಾಜಕೀಯ ಮುಖಂಡ ರಮೇಶ್ ಹೆಗ್ಡೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.