ADVERTISEMENT

ಮೂವರ ಅಮಾನತು: ತನಿಖೆಗೆ ಆದೇಶ

ಕೈದಿಗಳ ಬಿಡುಗಡೆ ಸಮಾರಂಭದಲ್ಲಿ ಜೈಲಿನೊಳಗೆ ‘ಐಟಂ ಸಾಂಗ್‌’ ಪ್ರಕರಣ

​ಪ್ರಜಾವಾಣಿ ವಾರ್ತೆ
Published 28 ಜನವರಿ 2016, 19:46 IST
Last Updated 28 ಜನವರಿ 2016, 19:46 IST
ಗಣರಾಜ್ಯೋತ್ಸವದ ದಿನ ವಿಜಯಪುರದ ದರ್ಗಾ ಜೈಲಿನಲ್ಲಿ ನಡೆದಿರುವ ‘ಐಟಂ ಸಾಂಗ್‌’ ಪ್ರಕರಣದ ಕುರಿತು ಕಾರಾಗೃಹ ಪೊಲೀಸ್‌ ಮಹಾನಿರ್ದೇಶಕ ಎಚ್‌.ಎನ್‌. ಸತ್ಯನಾರಾಯಣರಾವ್‌ ಗುರುವಾರ ಜೈಲಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು
ಗಣರಾಜ್ಯೋತ್ಸವದ ದಿನ ವಿಜಯಪುರದ ದರ್ಗಾ ಜೈಲಿನಲ್ಲಿ ನಡೆದಿರುವ ‘ಐಟಂ ಸಾಂಗ್‌’ ಪ್ರಕರಣದ ಕುರಿತು ಕಾರಾಗೃಹ ಪೊಲೀಸ್‌ ಮಹಾನಿರ್ದೇಶಕ ಎಚ್‌.ಎನ್‌. ಸತ್ಯನಾರಾಯಣರಾವ್‌ ಗುರುವಾರ ಜೈಲಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು   

ವಿಜಯಪುರ: ಗಣರಾಜ್ಯೋತ್ಸವ ದಿನದಂದು ನಗರದ ದರ್ಗಾ ಜೈಲಿನಲ್ಲಿ ನಡೆದ ‘ಐಟಂ ಸಾಂಗ್‌’ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಕಾರಾಗೃಹ ಪೊಲೀಸ್‌ ಮಹಾನಿರ್ದೇಶಕ ಎಚ್‌.ಎನ್‌. ಸತ್ಯನಾರಾಯಣರಾವ್ ಹೇಳಿದರು.

ಸಹಾಯಕ ಜೈಲು ಅಧೀಕ್ಷಕ ಪಿ.ಎಸ್‌. ಅಂಬೇಕರ, ವಾರ್ಡರ್‌ ಸಂಪತ್‌ ಕುಮಾರ್‌, ಮುಖ್ಯ ವಾರ್ಡರ್‌ ಜಿ.ಎಂ. ಗುಂಡಳ್ಳಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಗುರುವಾರ ಅವರು ಪತ್ರಕರ್ತರಿಗೆ ತಿಳಿಸಿದರು.

ಜೈಲಿನೊಳಗೆ ‘ಐಟಂ ಹಾಡು’ಗಳಿಗೆ ಯುವತಿಯರಿಬ್ಬರು ನೃತ್ಯ ಮಾಡಿರುವುದು ಮೇಲ್ನೋಟಕ್ಕೆ ನಿಜ. ಇದು ಆಕ್ಷೇಪಾರ್ಹ ಮತ್ತು ಅಸಹ್ಯ ಘಟನೆ’ ಎಂದರು.

‘ನೃತ್ಯ ಮಾಡುತ್ತಿದ್ದ ಯುವತಿ ಮೇಲೆ ದುಡ್ಡು ಎಸೆದವ ಕೈದಿ. ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಬೆಳಗಾವಿ ಹಿಂಡಲಗಾ ಕಾರಾಗೃಹದ ಮುಖ್ಯ ಅಧೀಕ್ಷಕ ಟಿ.ಪಿ. ಶೇಷ ಅವರನ್ನು ಪ್ರಕರಣದ ತನಿಖೆಗಾಗಿ ನಿಯೋಜಿಸಲಾಗಿತ್ತು. ಅವರು ಬುಧವಾರದಿಂದಲೇ ತನಿಖೆ ನಡೆಸಿದ್ದಾರೆ. ನಾನೂ ಗುರುವಾರ ಮುಂಜಾನೆಯೇ ಭೇಟಿ ನೀಡಿ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದೆ. ಯುವತಿಯರ ನೃತ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲೂ ದಾಖಲಾಗಿದೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಮೂವರನ್ನು ಅಮಾನತುಗೊಳಿಸಲಾಗಿದೆ’ ಎಂದು ವಿವರಿಸಿದರು.

‘ವಾರ್ಡರ್‌ ಸಂಪತ್‌ಕುಮಾರ್‌ ನೃತ್ಯ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಸಿಬ್ಬಂದಿ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ. ಬೆಂಗಳೂರಿಗೆ ತೆರಳಿದ ನಂತರ ಸಮಗ್ರ ತನಿಖೆಗೆ ಆದೇಶ ನೀಡಲಾಗುವುದು’ ಎಂದು ತಿಳಿಸಿದರು.

‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾನೂನು ಕ್ರಮ ತೆಗೆದುಕೊಳ್ಳಲಿದ್ದಾರೆ. ತನಿಖೆ ಬಳಿಕ ಕಾನೂನಿನ ವ್ಯಾಪ್ತಿಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಇನ್ನೂ ಹೆಚ್ಚಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಇದೇ ಸಂದರ್ಭ ಹೇಳಿದರು.

ತರಬೇತಿ ಕೊರತೆ: ಇಲ್ಲಿನ ಕಾರಾಗೃಹ ಸಿಬ್ಬಂದಿಗೆ ಪ್ರಪಂಚ ಜ್ಞಾನವೇ ಇಲ್ಲ. ಯಾವ ಪರಿಜ್ಞಾನವೂ ಇಲ್ಲದೆ ಅವರು ತಮ್ಮದೇ ಲೋಕದಲ್ಲಿ ಮುಳುಗಿದ್ದು, ತರಬೇತಿಯ ಕೊರತೆ ಕಾಡುತ್ತಿದೆ. ಜೈಲಿನೊಳಗೆ ಯುವತಿಯರನ್ನು ಬಿಡುವ ಮುನ್ನ ಪ್ರವೇಶ ದಾಖಲೆ ಮಾಡಿಕೊಂಡಿಲ್ಲ. ಸಹಿಯನ್ನೂ ಹಾಕಿಸಿಕೊಂಡಿಲ್ಲ ಎಂದು ಅವರು ಹೇಳಿದಾಗ, ಸ್ಥಳದಲ್ಲಿಯೇ ಇದ್ದ ಜೈಲು ಅಧಿಕಾರಿಯೊಬ್ಬರು, ‘ಸರ್ಕಾರಿ ಅಧಿಕಾರಿಗಳ ಪ್ರವೇಶವನ್ನು ಮಾತ್ರ ದಾಖಲು ಮಾಡಿಕೊಳ್ಳುತ್ತೇವೆ’ಎಂದು ಹೇಳಿ ಮುಜುಗರಕ್ಕೀಡಾದರು.

ಉಪವಾಸದ ಬೆದರಿಕೆ:  ಸಿಬ್ಬಂದಿ ಅಮಾನತುಗೊಳಿಸಿದ ಕೂಡಲೇ, ಇದನ್ನು ವಿರೋಧಿಸಿ ಐದಾರು ಕೈದಿಗಳು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಬೆದರಿಕೆ ಹಾಕಿದರು ಎಂದು ತನಿಖೆ ಸಂದರ್ಭದಲ್ಲಿ ಹಾಜರಿದ್ದ ಜಿಲ್ಲಾ ಕಾರಾಗೃಹ ಸಲಹಾ ಸಮಿತಿ ಸದಸ್ಯೆ, ವಕೀಲೆ ಲಕ್ಷ್ಮೀ ದೇಸಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಪ್ರಕರಣದಲ್ಲಿ ಜೈಲಿನ ಅಧಿಕಾರಿಗಳದ್ದು ಯಾವ ತಪ್ಪು ಇಲ್ಲ. ಅವರನ್ನು ಅಮಾನತುಗೊಳಿಸಬೇಡಿ ಎಂದು ಕೈದಿಗಳು ಆಗ್ರಹಿಸಿದರು ಎಂದು ಅವರು ಹೇಳಿದರು.

ಕ್ರಿಮಿನಲ್‌ ಪ್ರಕರಣ ದಾಖಲು: ‘ಜೈಲಿನೊಳಗೆ ಅಶ್ಲೀಲ ನೃತ್ಯ ಮಾಡಿಸಿದ್ದಾರೆ ಎಂದು ಅಮಾನತುಗೊಂಡ ಮೂವರು ಜೈಲು ಅಧಿಕಾರಿಗಳ ವಿರುದ್ಧ ಸಬ್‌ ಜೈಲರ್‌ ನಾಯ್ಕೋಡಿ ನಗರದ ಆದರ್ಶನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಗೋಳಗುಮ್ಮಟ ಪೊಲೀಸ್‌ ಇನ್‌ಸ್ಪೆಕ್ಟರ್‌ ಟಿ.ಎಸ್‌.ಸುಲ್ಫಿ ತಿಳಿಸಿದರು.
*
ಈ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ. ಡಿಜಿಪಿ ಸಾಹೇಬರಿಗೆ ಎಲ್ಲವನ್ನೂ ತಿಳಿಸಿರುವೆ. ಜೈಲರ್ ಸಾಹೇಬರ ಸೂಚನೆ ಮೇರೆಗೆ ಯುವತಿಯರನ್ನು ಜೈಲಿನೊಳಗೆ ಬಿಟ್ಟಿರುವೆ.
- ಜಿ.ಎಂ. ಗುಂಡಳ್ಳಿ,
ಅಮಾನತುಗೊಂಡ ಮುಖ್ಯ ವಾರ್ಡರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.