ಯಾದಗಿರಿ: ಸಮೀಪದ ರಾಮಸಮುದ್ರ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸೀಮಂತ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀರೆ, ಕುಂಕುಮ, ಹೂ ಕೊಟ್ಟು ಅಭಿನಂದಿಸಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಖಾತೆ ಸಚಿವ ಡಾ.ವೀರೇಂದ್ರ ಕುಮಾರ್ ಎಲ್ಲ ಗರ್ಭಿಣಿಯರ ಪಾದ ಮುಟ್ಟಿ ನಮಸ್ಕರಿಸಿದರು!
ಈ ಅಚ್ಚರಿ ಘಟನೆಯಿಂದ ಗರ್ಭಿಣಿಯರು, ನೆರೆದ ಮಹಿಳೆಯರು, ಅಧಿಕಾರಿಗಳು ದಿಗ್ಭ್ರಮೆ ವ್ಯಕ್ತಪಡಿಸಿದರು. ‘ಏ ಸಬ್ ಮಹಿಳಾ ಲೋಗ್ ಹಮಾರ ಬೆಹನ್ ಹೈ. ಪಾದ್ ನಮಸ್ಕಾರ ಕರ್ ನಾ ಪಡೆಗಾ ತೋ ಕ್ಯಾ ತಕಲಿಫ್ ಹೈ’ ಎನ್ನುತ್ತ ನೆರೆದವರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಉಳಿದ ಗರ್ಭಿಣಿಯರ ಪಾದ ಮುಟ್ಟಿ ನಮಸ್ಕರಿಸಿದರು.
ಮೊಟ್ಟೆ ಮುಟ್ಟಲು ಹಿಂಜರಿದ ಸಚಿವ: ನಂತರ ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿದ ಸಚಿವ ಡಾ.ವೀರೇಂದ್ರ ಕುಮಾರ್ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಅಂಗನವಾಡಿ ಮಕ್ಕಳಿಗೆ ಹಾಲು ಕುಡಿಸಿ ಶೇಂಗಾ ಉಂಡಿ ತಿನ್ನಿಸಿದರು. ನಂತರ ಅಧಿಕಾರಿಗಳು ಮಕ್ಕಳಿಗೆ ನೀಡಲು ಮೊಟ್ಟೆ ತಂದಾಗ ಸಚಿವರು ಮೊಟ್ಟೆ ಮುಟ್ಟಲು ಹಿಂಜರಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು,‘ನಾನು ಅಪ್ಪಟ ಸಸ್ಯಾಹಾರಿ. ಹಾಗಾಗಿ, ಮೊಟ್ಟೆ ಮುಟ್ಟಲಿಲ್ಲ’ ಎಂದು ಸಮಜಾಯಿಷಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.