ಹಾಸನ: ‘ಜಾತಿ ಮತ್ತು ಧರ್ಮದ ಹೆಸರಿನಲ್ಲಿ ರಾಜಕೀಯ ಧ್ರುವೀಕರಣ ಸಾಧ್ಯವಿಲ್ಲ ಎಂಬುದು ನರೇಂದ್ರ ಮೋದಿ ಅವರಿಗೆ ಅರ್ಥವಾಗಿದ್ದರೆ, ಅವರ ಪಕ್ಷ ಇಷ್ಟು ವರ್ಷ ಜಾತಿ, ಧರ್ಮದ ಆಧಾರದಲ್ಲೇ ಯಾಕೆ ರಾಜಕೀಯ ಮಾಡುತ್ತ ಬಂದಿದೆ ಎಂಬುದನ್ನು ಜನತೆಗೆ ತಿಳಿಸಬೇಕು’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮೋದಿ ಹರಿಯಾಣದ ರೇವಾರಿಯಲ್ಲಿ ಮಾಡಿದ ಭಾಷಣಕ್ಕೆ ಅವರು ಪ್ರತಿಕ್ರಿಯೆ ನೀಡಿದರು. ‘ಧರ್ಮದ ಹೆಸರಿನಲ್ಲಿ ಮತ ಗಳಿಸಲು ಸಾಧ್ಯವಿಲ್ಲ ಎಂಬುದು ಈ ದೇಶದ ನಾಡಿ ಮಿಡಿತ ಅರಿತ ರಾಜಕಾರಣಿಗೆ ಗೊತ್ತಿದೆ. ಮೋದಿ ಈಗ ಆ ಧಾಟಿಯಲ್ಲಿ ಮಾತನಾಡಿದ್ದಾರೆ. ಆದರೆ ಮೋದಿ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕಾದರೆ ಆರ್ಎಸ್ಎಸ್ನವರು ಅವರ ಮುಂದೆ ನಾಲ್ಕು ಷರತ್ತುಗಳನ್ನು ಇಟ್ಟಿದ್ದಾರೆ. ಅದಕ್ಕೆ ಮೋದಿ ಒಪ್ಪಿದ್ದಾರೆ. ಆದ್ದರಿಂದ ಮೋದಿಯ ಕನಸು ಭಗ್ನವಾಗುವ ದಿನ ದೂರವಿಲ್ಲ’ ಎಂದರು.
‘ಮೋದಿ ಪ್ರಧಾನಿಯಾಗುವ ಕಾಲಕ್ಕೆ ನಾನು ಬದುಕಿರಲಾರೆ’ ಎಂದು ಸಾಹಿತಿ ಯು.ಆರ್. ಅನಂತಮೂರ್ತಿ ನೀಡಿರುವ ಹೇಳಿಕೆಯ ಬಗ್ಗೆ ಮಾತನಾಡುತ್ತ, ‘ಇದು ಅಪ್ರಸ್ತುತ ಹೇಳಿಕೆ. ಮೋದಿ ಬಿಜೆಪಿಯವರು ಬಿಂಬಿಸಿದ ಅಭ್ಯರ್ಥಿಯೇ ವಿನಾ ದೇಶದ 130 ಕೋಟಿ ಜನರ ಆಯ್ಕೆಯಲ್ಲ. ಒಂದು ವೇಳೆ ಅವರು ಪ್ರಧಾನಿ ಆದರೂ ದೇಶದ ಜಾತ್ಯತೀತ ವ್ಯವಸ್ಥೆಯನ್ನು ನಾಶ ಮಾಡಲು ಅವರಿಂದ ಸಾಧ್ಯ ಇಲ್ಲ. ಅನಂತಮೂರ್ತಿ ಅವರಲ್ಲಿ ಇಂಥ ಭಾವನೆ ಬರಬೇಕಾಗಿರಲಿಲ್ಲ. ಅವರು ನೋವಿನಿಂದ ಆ ಮಾತು ಹೇಳಿರಬಹುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.