ಅಥಣಿ (ಬೆಳಗಾವಿ ಜಿಲ್ಲೆ): ಎರಡೂ ಕೈಗಳನ್ನು ಹಗ್ಗದಿಂದ ಬಿಗಿದು ಮಾಂತ್ರಿಕರೊಬ್ಬರ ಬಳಿ ಕರೆದೊಯ್ಯುತ್ತಿದ್ದ ಪಟ್ಟಣದ ಯುವತಿಯೊಬ್ಬರನ್ನು ಶನಿವಾರ ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಟ್ಟಣದಲ್ಲಿ ಯಲ್ಲಮ್ಮ ಬಿಸುಕಲ್ಲವಡ್ಡರ ಎಂಬ ಯುವತಿಗೆ ಭೂತ ಚೇಷ್ಟೆ ಆಗಿದೆ ಎಂದು ತಿಳಿದ ಸಂಬಂಧಿಕರು, ಆಕೆಯ ಕೈಗಳನ್ನು ಕಟ್ಟಿ ಮಾಂತ್ರಿಕ ಬಾಬಾ ಅವರ ಬಳಿ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದರು. ವಿಷಯ ತಿಳಿದ, ಸ್ಥಳೀಯ ಪಿಎಸ್ಐ ಸುರೇಶ ಬೆಂಡಿಗುಂಬಳ ನೇತೃತ್ವದ ತಂಡ ಯುವತಿಯನ್ನು ರಕ್ಷಿಸಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿತು.
ಈ ಕುರಿತು ಯುವತಿಯ ಸಂಬಂಧಿ ನಾಗಮ್ಮ ಅವರನ್ನು ಸಂಪರ್ಕಿಸಿದಾಗ, ‘ಯಲ್ಲಮ್ಮ ಮಾನಸಿಕ ರೋಗದಿಂದ ಬಳಲುತ್ತಿದ್ದಳು. ಅಲ್ಲದೆ ಮದ್ಯವ್ಯಸನಿ. ಸಾರ್ವಜನಿಕರಿಗೆ ಕಲ್ಲೆಸೆದು ತೊಂದರೆ ಕೊಡುತ್ತಿದ್ದಳು. ಹೀಗಾಗಿ ಆಕೆಯ ಕೈಗಳನ್ನು ಕಟ್ಟಿ ಕರೆದೊಯ್ಯಲಾಗುತ್ತಿತ್ತು’ ಎಂದು ತಿಳಿಸಿದರು.
ವೈದ್ಯರ ಸಲಹೆ ಮೇರೆಗೆ, ಹೆಚ್ಚಿನ ಚಿಕಿತ್ಸೆಗಾಗಿ ಯಲ್ಲಮ್ಮ ಅವರನ್ನು ಬೆಳಗಾವಿಗೆ ಕರೆದೊಯ್ಯಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.