ADVERTISEMENT

ಯಾರು ಏನಂತಾರೆ?

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ನೊ ಕಾಮೆಂಟ್ಸ್ ಎಂದ ಸಿಎಂ
ಹುಬ್ಬಳ್ಳಿ:  ~ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರ ಬಂಧನ ಹಾಗೂ ಬಿ. ಶ್ರೀರಾಮುಲು ಅವರ ರಾಜೀನಾಮೆ ಪ್ರಕರಣಗಳಿಂದ ಸರ್ಕಾರಕ್ಕೆ ಯಾವುದೇ ಅಭದ್ರತೆ ಇಲ್ಲ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ  ಹೇಳಿದರು.

ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿದ ಅವರು ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

~ರೆಡ್ಡಿ ವಿರುದ್ಧ ಆರೋಪ ಬಂದ ತಕ್ಷಣ ಯಾರೂ ಅಪರಾಧಿ ಆಗುವುದಿಲ್ಲ. ಹಾಗೆಂದು ನಾನು ಯಾರನ್ನೂ ಸಮರ್ಥಿಸಲೂ ಹೋಗುವುದಿಲ್ಲ. ರೆಡ್ಡಿ ಪ್ರಕರಣ ಕುರಿತಂತೆ ವಿಚಾರಣೆ ನಡೆದಿರುವ ಕಾರಣ ಹೆಚ್ಚೇನೂ ಪ್ರತಿಕ್ರಿಯಿಸಲಾರೆ~ ಎಂದಷ್ಟೇ ಅವರು ನುಡಿದರು.

ರೆಡ್ಡಿ ನಿರಪರಾಧಿ ಎಂದ ಮಾಜಿ ಸಿಎಂ
 ಜನಾರ್ದನ ರೆಡ್ಡಿ ಅವರ ಬಂಧನ ರಾಜಕೀಯ ಪ್ರೇರಿತವಾಗಿದೆ. ಅವರು ಆರೋಪಮುಕ್ತರಾಗಿ ಹೊರಬರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊಳ್ಳೇಗಾಲದಲ್ಲಿ ಹೇಳಿದ್ದಾರೆ. 

 ಸುದ್ದಿಗಾರರೊಡನೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ನಿರಪರಾಧಿ, ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ಹೇಳಿದರು.

ರಾಜಕೀಯ ಪ್ರೇರಿತ ಎನ್ನುತ್ತಾರೆ ಶೆಟ್ಟರ

 ಜನಾರ್ದನ ರೆಡ್ಡಿ ಬಂಧನ ಹಾಗೂ ಶ್ರೀರಾಮುಲು ನಿವಾಸದ ಮೇಲಿನ ದಾಳಿ ರಾಜಕೀಯ ಪ್ರೇರಿತ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಜಗದೀಶ ಶೆಟ್ಟರ ಆರೋಪಿಸಿದರು.

~ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆ ಎಂಬುದು ಈಗಾಗಲೇ ಹಿಂದಿನ ಹಲವಾರು ಪ್ರಕರಣಗಳಲ್ಲಿ ಸಾಬೀತಾಗಿದೆ. ತನ್ನ ರಾಜಕೀಯ ವಿರೋಧಿಗಳನ್ನು ಹಣಿಯುವ ಸಂದರ್ಭ ಬಂದಾಗಲೆಲ್ಲಾ ಯುಪಿಎ ಸರ್ಕಾರ ಕೇಂದ್ರೀಯ ತನಿಖಾ ಸಂಸ್ಥೆಯನ್ನು ದಾಳವಾಗಿ ಬಳಸಿಕೊಳ್ಳುತ್ತಿದೆ.  ದಾಳಿಯ ಹಿಂದಿನ ರಾಜಕೀಯ ಪ್ರೇರಣೆ ಕುರಿತಾದ ಸತ್ಯಾಸತ್ಯತೆ ಶೀಘ್ರ ಹೊರಬೀಳಲಿದೆ~ ಎಂದರು.

 ಕಾಂಗ್ರೆಸ್ ಕಪ್ಪು ನೆರಳು
ಜನಾರ್ದನರೆಡ್ಡಿ ಅವರನ್ನು ಬಂಧಿಸುವ ಮೂಲಕ ಸಿಬಿಐ, ಕಾಂಗ್ರೆಸ್ ಪಕ್ಷದ ಕಪ್ಪುನೆರಳು ಎಂಬುದು ಸಾಬೀತಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಆರೋಪಿಸಿದರು.

ರೆಡ್ಡಿ ವಿರುದ್ಧ ಬಂದ ಎಲ್ಲಾ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು, ಸಿಬಿಐ, ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ರೆಡ್ಡಿ ಅವರನ್ನು ಬಂಧಿಸಿದೆ ಎಂದು ದೂರಿದರು.

ಕೇಂದ್ರದ ಸ್ವಾರ್ಥ
` ಕೇಂದ್ರ ಸರ್ಕಾರ ತನ್ನ ಸ್ವಾರ್ಥ ಸಾಧನೆಗಾಗಿ ಸಿಬಿಐ ಅನ್ನು ಕೈಗೊಂಬೆಯಾಗಿಸಿಕೊಂಡಿದೆ~ ಎಂದು ಗೃಹ ಸಚಿವ ಆರ್.ಅಶೋಕ ಟೀಕಿಸಿದರು.

`ತಾರ್ಕಿಕ ಅಂತ್ಯ ಕಾಣಲಿದೆ~
ಬೆಂಗಳೂರು: ಸಿಬಿಐ ದಾಳಿಯಿಂದಾಗಿ ಬಳ್ಳಾರಿಯ ರೆಡ್ಡಿ ಸಹೋದರರ ನಿಜವಾದ ಬಣ್ಣ ಬಯಲಾಗಿದೆ ಎಂದು ಜೆಡಿಎಸ್ ವಕ್ತಾರ  ವೈ.ಎಸ್.ವಿ.ದತ್ತ ಹೇಳಿದ್ದಾರೆ.

 ರೈತ ಸಂಘ ಸ್ವಾಗತ
ಚಿತ್ರದುರ್ಗ:  ಮಾಜಿ ಸಚಿವ ಜನಾರ್ದನರೆಡ್ಡಿ ಬಂಧನವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸ್ವಾಗತಿಸಿದೆ.

ತಾವು ಮಾಡಿದ ಪಾಪಗಳಿಗೆ ಈಗ ಶಿಕ್ಷೆಯಾಗುತ್ತಿದೆ. ಉಪ್ಪು ತಿಂದವನು ನೀರು ಕುಡಿಯಲೇಬೇಕು. ಜನಾರ್ದನರೆಡ್ಡಿ ಬಂಧನ ಖಂಡಿಸಿ ಯಾರಾದರೂ ಪ್ರತಿಭಟನೆ ನಡೆಸಿದರೆ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT