ADVERTISEMENT

ರಾಜೀನಾಮೆ ಸಲ್ಲಿಸಲು ದಳ ಶಾಸಕರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ಬೆಂಗಳೂರು: ಕಾವೇರಿ ನದಿಯಿಂದ ತಮಿಳುನಾಡಿಗೆ ಪ್ರತಿನಿತ್ಯ ಒಂಬತ್ತು ಸಾವಿರ ಕ್ಯೂಸೆಕ್ (ಇದೇ 15ರ ವರೆಗೆ) ನೀರು ಬಿಡಬೇಕು ಎಂದು ಸಿಆರ್‌ಎ ನೀಡಿರುವ ಆದೇಶದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮಂಡ್ಯ ಜಿಲ್ಲೆಯ ರೈತರಿಗೆ ಬೆಂಬಲ ಸೂಚಿಸಲು, ಜಿಲ್ಲೆಯ ಜೆಡಿಎಸ್ ಶಾಸಕರು ಮತ್ತು ಮಂಡ್ಯ ಸಂಸದ ಚೆಲುವರಾಯಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ನಿರ್ಧಾರ ಕೈಗೊಂಡಿದ್ದಾರೆ.

ಸ್ಪೀಕರ್ ಕೆ.ಜಿ. ಬೋಪಯ್ಯ ಅವರಿಗೆ ಬರೆದಿರುವ ಪತ್ರವನ್ನು ಶಾಸಕರಾದ ಸಿ.ಎಸ್. ಪುಟ್ಟರಾಜು, ಎ.ಬಿ. ರಮೇಶ್ ಬಂಡಿಸಿದ್ದೇಗೌಡ, ಕಲ್ಪನಾ ಸಿದ್ದರಾಜು ಮತ್ತು ಎಂ. ಶ್ರೀನಿವಾಸ್ ಹಾಗೂ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರಿಗೆ ಬರೆದಿರುವ ಪತ್ರವನ್ನು ಸಂಸದ ಚೆಲುವರಾಯಸ್ವಾಮಿ ಅವರು ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಅವರಿಗೆ ಪಕ್ಷದ ಕಚೇರಿಯಲ್ಲಿ ಸೋಮವಾರ ಸಲ್ಲಿಸಿದರು.

ರಾಜೀನಾಮೆ ವಿಷಯ ಕುರಿತು ಚರ್ಚಿಸಲು ಜೆಡಿಎಸ್‌ನ ಎಲ್ಲ ಶಾಸಕರ ಸಭೆ ಬುಧವಾರ ನಡೆಯಲಿದೆ. ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರೂ ಸಭೆಯಲ್ಲಿ ಹಾಜರಿರುತ್ತಾರೆ. ದೇವೇಗೌಡರು ಅನುಮತಿ ನೀಡಿದರೆ, ಈ ಜನಪ್ರತಿನಿಧಿಗಳು ರಾಜೀನಾಮೆ ಪತ್ರವನ್ನು ಸಂಬಂಧಪಟ್ಟವರಿಗೆ ಖುದ್ದಾಗಿ ನೀಡುತ್ತಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.