ಬೆಂಗಳೂರು: ಮುಂಗಾರು ಮಳೆ ಆರಂಭವಾಗುವ ಮೊದಲೇ ರಾಜ್ಯದಲ್ಲಿ ಡೆಂಗಿ ಪ್ರಕರಣ ಹೆಚ್ಚಾಗಿದ್ದು, ಈಗಾಗಲೇ 1,000 ಪ್ರಕರಣಗಳು ದಾಖಲಾಗಿವೆ.
ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಬೆಂಗಳೂರು ನಗರದಲ್ಲಿಯೇ 313 ಮಂದಿ ಡೆಂಗಿ ಜ್ವರದಿಂದ ಬಳಲಿದ್ದಾರೆ. ‘ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಪ್ರದೇಶಗಳಲ್ಲಿಯೇ ಹೆಚ್ಚು ಡೆಂಗಿ ಪ್ರಕರಣಗಳು ಕಂಡುಬಂದಿವೆ. ಸೊಳ್ಳೆಗಳ ತಡೆಗೆ ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದ್ದರೂ ಪ್ರಯೋಜನ ಆಗಿಲ್ಲ. ಹೋದ ವರ್ಷ ರಾಜ್ಯದಲ್ಲಿ 17,000 ಹಾಗೂ ನಗರದಲ್ಲಿ 7,000 ಡೆಂಗಿ ಪ್ರಕರಣಗಳು ದಾಖಲಾಗಿದ್ದವು’ ಎಂದು ಸಂಶೋಧನಾ ಅಧಿಕಾರಿ ಡಾ. ಮಹಮ್ಮದ್ ಶರೀಫ್ ತಿಳಿಸಿದರು.
‘ಚುನಾವಣೆ ಇದ್ದ ಕಾರಣ ಸಮನ್ವಯ ಸಭೆಯನ್ನು ಮುಂದೂಡಲಾಗಿತ್ತು. ಸದ್ಯದಲ್ಲೇ ನೋಡಲ್ ಅಧಿಕಾರಿಗಳ ಸಭೆ ನಡೆಸಲಾಗುವುದು’ ಎಂದರು.
‘ಬೇರೆ ಜಿಲ್ಲೆಗಳಿಗಿಂತ ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಿದೆ. ಇಲ್ಲಿ 500ಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳಿವೆ. ಹೀಗಾಗಿ ಡೆಂಗಿ ಪ್ರಕರಣಗಳು ಸಹಜವಾಗಿಯೇ ಇಲ್ಲಿ ಹೆಚ್ಚು ವರದಿಯಾಗಿವೆ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿ ಎಚ್.ಎನ್.ಲೋಕೇಶ್ ಅವರು ಹೇಳಿದರು.
‘ಬಿಬಿಎಂಪಿ ವತಿಯಿಂದ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಡೆಂಗಿ ತಡೆಗಟ್ಟುವ ಉದ್ದೇಶದಿಂದ ಸೊಳ್ಳೆಗಳನ್ನು ಕಡಿಮೆ ಮಾಡುವ ಕೆಲಸವೂ ನಡೆದಿದೆ. ಹೋದವರ್ಷದ ಬಜೆಟ್ನಲ್ಲಿ ಇದಕ್ಕಾಗಿಯೇ ₹ 13 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಅವರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.