ADVERTISEMENT

‘ರಾಜ್ಯಸಭೆ ಸ್ಥಾನ ಬಿಡದಿದ್ದರೆ ಮೈತ್ರಿ ಕಡಿತ’

ರಾಜೀವ್ ಚಂದ್ರಶೇಖರ್‌ ಬಿಜೆಪಿ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 19:29 IST
Last Updated 3 ಮಾರ್ಚ್ 2018, 19:29 IST
‘ರಾಜ್ಯಸಭೆ ಸ್ಥಾನ ಬಿಡದಿದ್ದರೆ ಮೈತ್ರಿ ಕಡಿತ’
‘ರಾಜ್ಯಸಭೆ ಸ್ಥಾನ ಬಿಡದಿದ್ದರೆ ಮೈತ್ರಿ ಕಡಿತ’   

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಾರ್ಚ್‌ 23ರಂದು ನಡೆಯುವ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಒಂದು ಸ್ಥಾನ ಬಿಟ್ಟುಕೊಡದಿದ್ದರೆ ಬಿಬಿಎಂಪಿಯಲ್ಲಿ ಮೈತ್ರಿ ಕಡಿದುಕೊಳ್ಳುವುದಾಗಿ ಕಾಂಗ್ರೆಸ್‌ಗೆ ಜೆಡಿಎಸ್‌ ಎಚ್ಚರಿಕೆ ನೀಡಿದೆ.

ಕಾಂಗ್ರೆಸ್‌ ತನ್ನ ಶಾಸಕ ಬಲದ ಆಧಾರದಲ್ಲಿ ಮೂರು ಸ್ಥಾನಗಳಿಗೆ ಸ್ಪರ್ಧಿಸಬಹುದು. ಆದರೆ, ಮೂರನೇ ಸ್ಥಾನ ಗೆಲ್ಲಲು ಕೆಲವು ಮತಗಳು ಕೊರತೆ ಆಗುತ್ತದೆ. ಆದ್ದರಿಂದ ಈ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎಂದು ಒತ್ತಡ ಹೇರುತ್ತಿದೆ. ಈ ಸಂಬಂಧ ಜೆಡಿಎಸ್‌ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ದೆಹಲಿಯಲ್ಲಿ ಕಾಂಗ್ರೆಸ್‌ ಮುಖಂಡರ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ, ಉದ್ಯಮಿ ಚೆನ್ನಾರೆಡ್ಡಿ ಕಾಂಗ್ರೆಸ್‌ನಿಂದ ಮೂರನೇ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಜೆಡಿಎಸ್‌, ಬಿ.ಎಂ.ಫಾರೂಕ್‌ ಅವರನ್ನು ಕಣಕ್ಕಿಳಿಸಲು ಉದ್ದೇಶಿಸಿದೆ.

ADVERTISEMENT

ಕಾಂಗ್ರೆಸ್‌ನ ಎರಡು ಸ್ಥಾನಗಳಿಗೆ ಟಿಕೆಟ್‌ ಪಡೆಯಲು ಪಕ್ಷದಲ್ಲಿ ತೀವ್ರ ಪೈಪೋಟಿ ನಡೆದಿದೆ.  ಸಚಿವ ರೋಷನ್‌ಬೇಗ್‌, ಕೆ. ರೆಹಮಾನ್‌ ಖಾನ್‌, ನಜೀರ್ ಅಹಮದ್‌, ಸಲೀಂ ಅಹಮದ್‌, ರಾಣಿ ಸತೀಶ್‌, ಕೈಲಾಸನಾಥ ಪಾಟೀಲ, ಚೆನ್ನಾರೆಡ್ಡಿ, ಮಾಲಕರಡ್ಡಿ, ಶಾಮನೂರು ಶಿವಶಂಕರಪ್ಪ, ಲೋಕಸಭೆ ಮಾಜಿ ಸ್ಪೀಕರ್‌ಗಳಾದ ಮೀರಾ ಕುಮಾರ್‌ ಹಾಗೂ ಶಿವರಾಜ್‌ ಪಾಟೀಲರು ಪ್ರಯತ್ನ ಆರಂಭಿಸಿದ್ದಾರೆ. ಹೀಗಾಗಿ ಮೂರನೇ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಸಾಧ್ಯತೆ ಕಡಿಮೆ ಎಂದೂ ಹೇಳಲಾಗಿದೆ.

ರಾಜೀವ್‌ ಚಂದ್ರಶೇಖರ್‌ ಅವರನ್ನು ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದು ಬಹುತೇಕ ಖಚಿತ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.