ADVERTISEMENT

ರಾಸಲೀಲೆ ಸಿ.ಡಿ ಪ್ರಕರಣದ ಬಗ್ಗೆ ಚಿತ್ರನಟಿ ರಂಜಿತಾ ಆರೋಪ

​ಪ್ರಜಾವಾಣಿ ವಾರ್ತೆ
Published 1 ಜನವರಿ 2011, 8:30 IST
Last Updated 1 ಜನವರಿ 2011, 8:30 IST

ಬೆಂಗಳೂರು: ‘ರಾಸಲೀಲೆ ಸಿ.ಡಿ ಪ್ರಕರಣದ ಹಿಂದೆ ಕ್ರೈಸ್ತ ಮಿಷನರಿಯ ಕೈವಾಡವಿದೆ’ ಎಂದು ನಟಿ ರಂಜಿತಾ    ಆರೋಪಿಸಿದ್ದಾರೆ.

ರಾಸಲೀಲೆ ಪ್ರಕರಣ ಬಹಿರಂಗಗೊಂಡ ನಂತರ ಇದೇ ಮೊದಲ ಬಾರಿಗೆ ಮಾಧ್ಯಮಗಳ ಎದುರು  ಬಂದ ರಂಜಿತಾ ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ರಾಸಲೀಲೆ ಸಿ.ಡಿ ಯಲ್ಲಿರುವುದು ನಾನಲ್ಲ. ನನ್ನ ವಿರುದ್ಧ ವ್ಯವಸ್ಥಿತ ಪಿತೂರಿ ಮಾಡಿರುವ ಕೆಲವರು ಗೌರವಕ್ಕೆ ಚ್ಯುತಿ ತಂದಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ನನಗೆ ಮತ್ತು ಕುಟುಂಬ ಸದಸ್ಯರಿಗೆ ರಕ್ಷಣೆ ನೀಡುವ ಭರವಸೆ ಕೊಟ್ಟರೆ ಈ ಷಡ್ಯಂತ್ರ ಮಾಡಿದವರ ಹೆಸರು ಬಹಿರಂಗಪಡಿಸಲು ಸಿದ್ಧ’ ಎಂದರು.

‘ಕೆಲ ಮಾಧ್ಯಮಗಳು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿವೆ. ಕೆಲವರಂತೂ ನಾನು ತಲೆಮರೆಸಿಕೊಂಡಿದ್ದೇನೆ ಎಂಬ ಸುದ್ದಿಯನ್ನು ಬಿತ್ತರಿಸುತ್ತಿದ್ದಾರೆ. ಇದೇ ಕಾರಣಕ್ಕೆ ನಾನು ಮಾಧ್ಯಮದ ಎದುರು ಬರಬೇಕಾಯಿತು. ಘಟನೆ ನಡೆದಾಗ ನನ್ನ ಜೀವಕ್ಕೆ ಅಪಾಯವಿತ್ತು. ಆದ್ದರಿಂದ ನಾನು ಅಮೆರಿಕಕ್ಕೆ ಹೋಗಿದ್ದೆ. ಅನಂತರ ಸಿಐಡಿ ಅಧಿಕಾರಿಗಳಿಗೆ ನನ್ನ ಹೇಳಿಕೆ ನೀಡಿದ್ದೇನೆ’ ಎಂದು ಅವರು ವಿವರಿಸಿದರು.

ಲೆನಿನ್ ಬೆದರಿಕೆ ಹಾಕಿದ್ದನೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ಲೆನಿನ್ ಬೆದರಿಕೆ ಹಾಕಿಲ್ಲ. ಆದರೆ ಆತನ ಬೆಂಬಲಿಗರು ಎಂದು ಹೇಳಿಕೊಂಡ ಕೆಲವರು ಹೆದರಿಸಿದರು. ಆದ್ದರಿಂದಲೇ ಘಟನೆ ನಡೆದ ತಕ್ಷಣ ನಾನು ಲೆನಿನ್ ವಿರುದ್ಧ ದೂರು ನೀಡಲಿಲ್ಲ’ ಎಂದರು.

ತಾಂತ್ರಿಕ ಸೆಕ್ಸ್ ಬಗ್ಗೆ ನಿತ್ಯಾನಂದ ಸ್ವಾಮಿ ಮಾಡಿಕೊಂಡಿದ್ದರು ಎನ್ನಲಾದ ರಹಸ್ಯ ಒಪ್ಪಂದಕ್ಕೆ ನೀವೂ ಸಹಿ ಹಾಕಿದ್ದಿರ ಎಂದು ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ರಂಜಿತಾ ಅವರು ‘ಒಂದು ವರ್ಷದಿಂದ ನಾನು ಧ್ಯಾನಪೀಠದ ಭಕ್ತೆಯಾಗಿದ್ದೆ. ಈಗಲೂ ಆಶ್ರಮದ ಜತೆ ಸಂಬಂಧ ಇಟ್ಟುಕೊಂಡಿದ್ದೇನೆ. ಆದರೆ ಅಂತಹ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಆಶ್ರಮದಲ್ಲಿದ್ದವರೂ ಅಂತಹ ಒಪ್ಪಂದಕ್ಕೆ ಸಹಿ ಹಾಕಿದ್ದ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ರಂಜಿತಾ ಪರ ವಕೀಲರಾದ ದೇವರಾಜ್ ಮತ್ತು ನಾಯ್ಡು ಅವರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.