ಹುಬ್ಬಳ್ಳಿ: ಮೂರು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ನೈರುತ್ಯ ರೈಲ್ವೆಯ ಡಿ ಗುಂಪಿನ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸೋಮವಾರ ಮತ್ತೆ ಚಾಲನೆ ದೊರೆಯಿತು.
4701 ಡಿ ಗುಂಪಿನ ಹುದ್ದೆಗಳ ನೇಮಕಾತಿಗಾಗಿ 2008ರ ಜನವರಿ ತಿಂಗಳಲ್ಲಿ ನಡೆದ ದೈಹಿಕ ಪರೀಕ್ಷೆ ಸಂದರ್ಭದಲ್ಲಿ, ಹೊರರಾಜ್ಯದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗಲಾಟೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು.
ನಗರದ ರೈಲ್ವೆ ಮೈದಾನದಲ್ಲಿ ಸೋಮವಾರ ಬೆಳಿಗ್ಗೆ 7ರಿಂದ ದೈಹಿಕ ಪರೀಕ್ಷೆ ಆರಂಭಗೊಂಡು ಸಂಜೆ 5.45ರವರೆಗೆ ನಡೆಯಿತು.
ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ನಸುಕಿನಲ್ಲಿಯೇ ಅಭ್ಯರ್ಥಿಗಳು ಆಗಮಿಸಿ ಪಾಳಿಯಲ್ಲಿ ನಿಂತಿದ್ದರು. ರೈಲ್ವೆ ಮೈದಾನದಲ್ಲಿ ಇರುವ ಬ್ಯಾಡ್ಮಿಂಟಲ್ ಹಾಲ್ ಕಟ್ಟಡದ ಮೂಲಕ ಅಭ್ಯರ್ಥಿಗಳನ್ನು ಸರದಿಯ ಮೇಲೆ ಮೈದಾನದೊಳಕ್ಕೆ ಬಿಡಲಾಯಿತು. ಅಭ್ಯರ್ಥಿಗಳ ಓಡುವ ಸಾಮರ್ಥ್ಯದ ಪರೀಕ್ಷೆ ಇದಾಗಿತ್ತು. ಒಂದು ಬಾರಿಗೆ 40 ಅಭ್ಯರ್ಥಿಗಳನ್ನು ಏಕಕಾಲಕ್ಕೆ ಓಡಿಸಲಾಯಿತು.
ಮಧ್ಯಾಹ್ನದ ನಂತರ 50 ಅಭ್ಯರ್ಥಿಗಳನ್ನು ಏಕಕಾಲಕ್ಕೆ ಓಡಿಸಲಾಯಿತು. ಆರು ನಿಮಿಷದ ಒಳಗಾಗಿ ಒಂದೂವರೆ ಕಿ.ಮೀ. ಓಡುವಲ್ಲಿ ಯಶಸ್ವಿಯಾದವರು ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು.ಮೊದಲ ದಿನದ ಈ ದೈಹಿಕ ಪರೀಕ್ಷೆಯಲ್ಲಿ 1679 ಅಭ್ಯರ್ಥಿಗಳು ಪಾಲ್ಗೊಂಡರು. ಈ ಪೈಕಿ 279 ಅಭ್ಯರ್ಥಿಗಳು ಮಾತ್ರ ತೇರ್ಗಡೆಯಾದರು. ಸುಮಾರು 40 ದಿನಗಳವರೆಗೆ ಈ ದೈಹಿಕ ಪರೀಕ್ಷೆ ನಡೆಯಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.