ಕಾಳಗಿ (ಕಲಬುರ್ಗಿ ಜಿಲ್ಲೆ): ಕಾಳಗಿ ಮತ್ತು ಸುತ್ತಲಿನ ಆರು ತಾಂಡಾಗಳಲ್ಲಿ ಕೆಲವು ದಿನಗಳಿಂದ ಉಲ್ಬಣಗೊಂಡಿರುವ ವಾಂತಿಭೇದಿ ಪ್ರಕರಣಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮತ್ತು ಗ್ರಾಮಾಡಳಿತ ಹಗಲಿರುಳು ಪ್ರಯತ್ನ ಮಾಡುತ್ತಿವೆ.
ಜೂನ್ 16ರ ಮಂಗಳವಾರ 8 ಪ್ರಕರಣ ಕಂಡುಬಂದಿರುವ ಬೆನ್ನಲ್ಲೇ ದಿನಕಳೆದಂತೆ ಅವುಗಳ ಸಂಖ್ಯೆ ಹೆಚ್ಚಾಗಿ ಭಾನುವಾರ ಸಂಜೆವರೆಗೆ ಒಟ್ಟು 175ಕ್ಕೂ ಹೆಚ್ಚು ಪ್ರಕರಣ ವರದಿಯಾಗಿವೆ. ಬಹುಪಾಲು ಜನರು ಇಲ್ಲಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇವರಲ್ಲಿ ಮಕ್ಕಳು, ವೃದ್ಧರು ಹಾಗೂ ಮಹಿಳೆಯರ ಸಂಖ್ಯೆ ಅಧಿಕವಾಗಿದೆ.
ಭಾನುವಾರ ಉಪಲೋಕಾಯುಕ್ತ ಸುಭಾಷ್ ಬಿ.ಆಡಿ, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ನಂತರ ಕುಡಿಯುವ ನೀರಿನ ಮೂಲವಾದ ಬುಗ್ಗಿಯ ಬಾವಿಗೆ ಭೇಟಿ ನೀಡಿ ಪರಿಶೀಲಿಸಿದರು.
‘ಕಾಳಗಿ ಮತ್ತು ಲಕ್ಷ್ಮಣ ನಾಯಕ್ ತಾಂಡಾದಲ್ಲಿ ಭಾನುವಾರ ಬೆಳಿಗ್ಗೆ ಇಬ್ಬರು ಮೃತಪಟ್ಟಿದ್ದು ನಿಜ. ಆದರೆ, ಅವರು ವಾಂತಿಭೇದಿಯಿಂದ ಸಾವನ್ನಪ್ಪಿಲ್ಲ. ಒಬ್ಬ ಹೃದಯಘಾತದಿಂದ ಮೃತಪಟ್ಟಿದ್ದರೆ, ಮತ್ತೊಬ್ಬರದು ವಯೋಸಹಜ ಸಾವು’ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.