ಮಂಗಳೂರು: 15 ಸಜೀವ ಗುಂಡುಗಳೊಂದಿಗೆ ವಿಮಾನ ಏರಲು ಹೊರಟಿದ್ದ ಒಬ್ಬನನ್ನು ಇಲ್ಲಿನ ಬಜ್ಪೆಯಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಪೊಲೀಸರು ಶನಿವಾರ ಮಧ್ಯಾಹ್ನ ಬಂಧಿಸಿದ್ದಾರೆ.
ಬೆಳ್ತಂಗಡಿ ನಿವಾಸಿ ಪಿ.ಇಸ್ಮಾಯಿಲ್ ಬಂಧಿತ ವ್ಯಕ್ತಿ. ಈತ ಇಂಡಿಗೋ ಏರ್ ಲೈನ್ಸ್ ವಿಮಾನದಲ್ಲಿ ಮಂಗಳೂರಿನಿಂದ ನಾಗಪುರಕ್ಕೆ ಹೊರಟಿದ್ದ ಎಂದು ಸಿಐಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ದೇಶೀಯ ಪ್ರಯಾಣಿಕರ ತಪಾಸಣಾ ಪ್ರದೇಶದಲ್ಲಿ ಸಬ್ ಇನ್ ಸ್ಪೆಕ್ಟರ್ ಸೌರಬ್ ಕುಮಾರ್ ನೇತೃತ್ವದ ತಂಡ ಪ್ರಯಾಣಿಕರನ್ನು ತಪಾಸಣೆ ಮಾಡುತ್ತಿತ್ತು. ಆಗ ಇಸ್ಮಾಯಿಲ್ ಬಳಿ ಇದ್ದ ಚೀಲದಲ್ಲಿ 0.32 ಪಿಸ್ತೂಲ್ ನಲ್ಲಿ ಬಳಸುವ 15 ಸಜೀವ ಗುಂಡುಗಳಿದ್ದವು. ವಿಚಾರಣೆ ವೇಳೆ ಆತ ಸರಿಯಾದ ದಾಖಲೆ ಹಾಜರುಪಡಿಸಿಲ್ಲ. ಆತನನ್ನು ಬಂಧಿಸಿ, ಗುಂಡುಗಳ ಸಮೇತ ಮುಂದಿನ ಕ್ರಮಕ್ಕಾಗಿ ಸ್ಥಳೀಯ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಸಿಐಎಸ್ಎಫ್ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.