ADVERTISEMENT

ವಿಶ್ವಕನ್ನಡ ಸಮ್ಮೇಳನಕ್ಕೆ ಚಿತ್ರರಂಗದ ರಂಗು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 16:55 IST
Last Updated 21 ಫೆಬ್ರುವರಿ 2011, 16:55 IST

ಬೆಂಗಳೂರು: ಕನ್ನಡ ಸಿನಿಮಾ ಮತ್ತು ಕಿರುತೆರೆ ಕಲಾವಿದರು ಮಾರ್ಚ್ 11ರಿಂದ ಬೆಳಗಾವಿಯಲ್ಲಿ ನಡೆಯ ಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಲಿದ್ದು, ಈ ಹಿನ್ನೆಲೆಯಲ್ಲಿ ಐದು ದಿನ ಚಿತ್ರ ಪ್ರದರ್ಶನ ಹೊರತುಪಡಿಸಿ ಚಿತ್ರೋದ್ಯಮದ ಎಲ್ಲ ಚಟುವಟಿಕೆ ಗಳನ್ನು ಸ್ಥಗಿತಗೊಳಿಸಲು ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ತೀರ್ಮಾನಿಸಿದೆ.

ಸೋಮವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಮಂಡಳಿಯ ಅಧ್ಯಕ್ಷ ಬಸಂತಕುಮಾರ ಪಾಟೀಲ, ‘ಮಾರ್ಚ್ 11ರಿಂದ 13ರವರೆಗೆ ನಡೆಯಲಿರುವ ಈ ಸಮ್ಮೇಳನದ ಮೆರವಣಿಗೆ, ವಿಚಾರ ಗೋಷ್ಠಿಗಳಲ್ಲಿ ಚಿತ್ರೋದ್ಯಮ ಮತ್ತು ಕಿರುತೆರೆ ಕಲಾವಿದರು ಪಾಲ್ಗೊಳ್ಳಲಿ ್ದದಾರೆ. ಆದ್ದರಿಂದ ಮಾರ್ಚ್ 9ರಿಂದ 13ರವರೆಗೆ ಐದು ದಿನಗಳ ಕಾಲ ಚಿತ್ರೋದ್ಯಮದ ಚಟುವಟಿಕೆಗಳಿಗೆ ರಜೆ ಘೋಷಿಸಲಾಗಿದೆ. ಈ ವಿಷಯ ವನ್ನು ಉದ್ಯಮದ ಎಲ್ಲಾ ಅಂಗ ಸಂಸ್ಥೆಗಳ ಅಧ್ಯಕ್ಷರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ’ ಎಂದರು.

‘ಸಂಗೀತ ನಿರ್ದೇಶಕ ಹಂಸಲೇಖ ಅವರ ನೇತೃತ್ವದಲ್ಲಿ ಸುಮಾರು 500 ಕಲಾವಿದರು ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಕೊಡಲಿದ್ದಾರೆ.

ನಂತರ ಬೆಳಗಾವಿ, ಕಿತ್ತೂರು, ಹುಬ್ಬಳ್ಳಿ, ಹಾವೇರಿ, ರಾಣೆ ಬೆನ್ನೂರು, ಚಿತ್ರದುರ್ಗ ಮಾರ್ಗವಾಗಿ ಈ ಎಲ್ಲ ಕಲಾವಿದರು ಪಯಣಿಸಲಿದ್ದು, ಮಾರ್ಗಮಧ್ಯೆ ಪ್ರಮುಖ ಹಳ್ಳಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ’ ಎಂದು ಹೇಳಿದರು.

‘ಪ್ರಯಾಣ, ಮೂಲಸೌಕರ್ಯ ಹೊರತುಪಡಿಸಿ ಯಾವುದೇ ರೀತಿಯ ಸಂಭಾವನೆಯನ್ನು ಕಲಾವಿದರಿಗೆ ನೀಡ ಲಾಗುತ್ತಿಲ್ಲ.
ಸರ್ಕಾರ ಮತ್ತು ಮಂಡಳಿ ಜಂಟಿಯಾಗಿ ಈ ವೆಚ್ಚವನ್ನು ಭರಿಸ ಲಿದ್ದು, ಖರ್ಚು ವೆಚ್ಚದ ಬಗ್ಗೆ ಇನ್ನೂ ಅಂದಾಜು ಮಾಡಿಲ್ಲ. ಅಲ್ಲದೆ ಸ್ವಇಚ್ಛೆ ಯಿಂದ ಕಲಾವಿದರು ಈ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದ ಅವರು, ‘ಸಮ್ಮೇಳನ ನಡೆಯುವ ಸಂದರ್ಭದಲ್ಲಿ ಬೆಳಗಾವಿ ಮತ್ತು ಎಲ್ಲಾ ತಾಲ್ಲೂಕು ಚಿತ್ರಮಂದಿರಗಳಲ್ಲಿ ಕೇವಲ ಕನ್ನಡ ಸಿನಿಮಾಗಳನ್ನೇ ಪ್ರದರ್ಶಿಸಬೇಕು ಎಂಬ ಆದೇಶವನ್ನು ಈಗಾಗಲೇ ಹೊರಡಿಸಲಾಗಿದೆ’ ಎಂದು ತಿಳಿಸಿದರು.

‘ಅನಿವಾರ್ಯ ಕಾರಣಗಳಿಂದ ಹಿರಿಯ ನಟ ಅಂಬರೀಶ್ ಈ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳು ತ್ತಿಲ್ಲ. ಆದರೆ ಅವರೊಂದಿಗೂ ಈ ಎಲ್ಲ ವಿಷಯಗಳನ್ನು ಚರ್ಚಿಸಲಾಗಿದೆ. ನಿಮ್ಮ ನಿರ್ಧಾರಗಳಿಗೆ ನನ್ನ ಸಹಮತ ವಿದೆ ಎಂದು ಅವರು ತಿಳಿಸಿದ್ದಾರೆ’ ಎಂದ ಪಾಟೀಲರು ಅಂಬರೀಶ್ ಅವ ರೊಂದಿಗಿನ ದೂರವಾಣಿ ಸಂಭಾಷಣೆ ಯನ್ನು ಈ ಸಂದರ್ಭದಲ್ಲಿ ಮೆಲುಕು ಹಾಕಿದರು.

ಸಂಗೀತ ನಿರ್ದೇಶಕ ಹಂಸಲೇಖ, ‘ಕನ್ನಡ ಭಾಷೆಯಿಂದ ಚಿತ್ರೋದ್ಯಮ ಹೆಚ್ಚು ಲಾಭ ಪಡೆಯುತ್ತಿದೆ. ಶ್ರೀ ಸಾಮಾನ್ಯ ಕನ್ನಡವನ್ನು ಹೆಚ್ಚು ಹೆಚ್ಚು ಪ್ರೀತಿಸುತ್ತಿದ್ದಾನೆ. ಆದರೆ ಕ್ರಿಯೆಗೆ ಪ್ರತಿ ಕ್ರಿಯೆ ಬೇಕು. ಅಭಿಮಾನದ ಪ್ರತಿಕ್ರಿಯೆ ವ್ಯಕ್ತವಾಗಬೇಕು. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ. ಈ ಕುರಿತು ಸಮಿತಿ ರಚಿಸ ಲಾಗಿದ್ದು ರೂಪುರೇಷೆ ಸಿದ್ಧಗೊಳ್ಳು ತ್ತಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಚಲನ ಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಶೋಕ್, ನಿರ್ಮಾಪಕರ ಸಂಘದ ಅಧ್ಯಕ್ಷ ಕೆ.ಸಿ.ಎನ್.ಚಂದ್ರಶೇಖರ್, ಚಲನಚಿತ್ರ ಮತ್ತು ಕಿರುತೆರೆ ನಟ ಶಿವಕುಮಾರ್, ನಿರ್ಮಾಪಕ ಚಿನ್ನೇ ಗೌಡ ಇತರರು ಉಪಸ್ಥಿತರಿದ್ದರು.

ಸ್ವಂತ ನಿರ್ಧಾರವೇ?

ಅದ್ದೂರಿಯಾಗಿ ನಡೆಯಲಿರುವ ಈ ಸಮ್ಮೇಳನದಲ್ಲಿ ಕನ್ನಡ ಚಿತ್ರೋದ್ಯಮ ಪಾಲ್ಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಅಪೀಲು ಮಾಡಿದ್ದಾರೆ...’ ಮಂಡಳಿಯ ಅಧ್ಯಕ್ಷ ಬಸಂತಕುಮಾರ ಪಾಟೀಲ ಈ ಮಾತು ಪತ್ರಕರ್ತರ ಆಕ್ರೋಶಕ್ಕೆ ಗುರಿಯಾಯಿತು.

ಮುಖ್ಯಮಂತ್ರಿಗಳು ಅಪೀಲು ಮಾಡದಿದ್ದಲ್ಲಿ ನೀವು ಆ ಬಗ್ಗೆ ಯೋಚನೆಯೇ ಮಾಡುತ್ತಿರಲಿ ಲ್ಲವೆ? 26 ವರ್ಷಗಳ ನಂತರ ನಡೆಯಲಿರುವ ಇಂತಹ ದೊಡ್ಡ ಪ್ರಮಾಣದ ಸಮ್ಮೇಳನದಲ್ಲಿ ಭಾಗ ವಹಿಸುವ ಬಗ್ಗೆ ಸ್ವಂತ ನಿರ್ಧಾರ ಕೈಗೊಳ್ಳಬೇಕು ಎನ್ನಿಸಲಿಲ್ಲವೆ? ಇತ್ಯಾದಿ ಪ್ರಶ್ನೆಗಳ ಸುರಿಮಳೆ ಯನ್ನು ಅವರು ಎದುರಿಸಬೇಕಾ ಯಿತು. ಆಗ ಬಸಂತಕುಮಾರ್, ‘ಖಂಡಿತ ಇದು ನಮ್ಮದೇ ನಿರ್ಧಾರ. ಆ ಆಸೆ ನಮಗೂ ಇದೆ. ಜೊತೆಗೆ ಮುಖ್ಯಮಂತ್ರಿಗಳ ಅಪೀಲೂ ಇದೆ ಎಂದು ಹೇಳಿದೆ ಅಷ್ಟೇ’ ಎಂದು ನಾಟಕೀಯವಾಗಿ ಸಂದರ್ಭವನ್ನು ತಿಳಿಗೊಳಿಸಲು ಪ್ರಯತ್ನಿಸಿದರು. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.