ADVERTISEMENT

ಶಿಕ್ಷಕರ ನೇಮಕ, ತರಬೇತಿಗೆ ಅಕಾಡೆಮಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST
ಶಿಕ್ಷಕರ ನೇಮಕ, ತರಬೇತಿಗೆ ಅಕಾಡೆಮಿ
ಶಿಕ್ಷಕರ ನೇಮಕ, ತರಬೇತಿಗೆ ಅಕಾಡೆಮಿ   

ಬೆಂಗಳೂರು:  ಶಿಕ್ಷಕರ ನೇಮಕಾತಿ, ತರಬೇತಿ, ಮೌಲ್ಯಮಾಪನ, ಸಂಶೋಧನೆಗೆ ನೆರವಾಗುವ ಉದ್ದೇಶದಿಂದ ಭಾರತೀಯ ಆಡಳಿತ ಅಕಾಡೆಮಿ ಮಾದರಿಯಲ್ಲಿ ಶಿಕ್ಷಕರ ತರಬೇತಿ ಅಕಾಡೆಮಿ ಸ್ಥಾಪಿಸಬೇಕು, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು  ಕರ್ನಾಟಕ ಜ್ಞಾನ ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಆಯೋಗದ ಅಧ್ಯಕ್ಷ ಡಾ.ಕಸ್ತೂರಿರಂಗನ್ ಅವರು ಅಂತಿಮ ಕಂತಿನ 28 ಶಿಫಾರಸುಗಳ ವರದಿಯನ್ನು ಬುಧವಾರ ಇಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಸಲ್ಲಿಸಿದರು.

ಶಿಕ್ಷಕರ ಬೋಧನಾ ಸಾಮರ್ಥ್ಯ ವೃದ್ಧಿ, ಕೌಶಲ ಅಭಿವೃದ್ಧಿಗೆ ಸಂಬಂಧಿಸಿದಂತೆ ತಲಾ ನಾಲ್ಕು, ಉನ್ನತ ಶಿಕ್ಷಣ ನೀತಿಯ ಬಗ್ಗೆ ಆರು, ಸಾರ್ವಜನಿಕ ಆರೋಗ್ಯ ಕುರಿತು ಮೂರು,  ಸಮುದಾಯ ಜ್ಞಾನ ಮತ್ತು ಆಚರಣೆಗಳು ಹಾಗೂ ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ (ಕೆ- ಜಿಐಎಸ್) ಕಾರ್ಯಪಡೆ ಕುರಿತು ತಲಾ ಐದು ಮತ್ತು ಜ್ಞಾನಾಧಾರಿತ ಸಮಾಜಕ್ಕೆ ಸಂಬಂಧಿಸಿದಂತೆ ಒಂದು ಶಿಫಾರಸು ಮಾಡಲಾಗಿದೆ ಎಂದರು.

ಈಗಾಗಲೇ 3 ಕಂತುಗಳಲ್ಲಿ ಆಯೋಗವು 60 ವಿವಿಧ ಶಿಫಾರಸುಗಳನ್ನು ಸಲ್ಲಿಸಿತ್ತು. ಅವುಗಳ ಪೈಕಿ 22 ಶಿಫಾರಸುಗಳು ಅನುಷ್ಠಾನದ ಹಂತದಲ್ಲಿವೆ. ಉಳಿದವುಗಳಿಗೆ ಆಯಾ ಇಲಾಖೆಗಳು ತಾತ್ವಿಕ ಒಪ್ಪಿಗೆ ನೀಡಿದ್ದು, ಸದ್ಯದಲ್ಲೇ ಜಾರಿಯಾಗುವ ನಿರೀಕ್ಷೆ ಇದೆ ಎಂದರು.
 
ವರದಿ ಸ್ವೀಕರಿಸಿದ ಶೆಟ್ಟರ್, ಆಯೋಗದ ಶಿಫಾರಸುಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಆಯೋಗದ ಸದಸ್ಯ ಕಾರ್ಯದರ್ಶಿ ಪ್ರೊ.ಎಂ.ಕೆ.ಶ್ರೀಧರ್ ಉಪಸ್ಥಿತರಿದ್ದರು.

ಪ್ರಮುಖ ಶಿಫಾರಸುಗಳು

* ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆಗಾಗಿ (ಕೆ- ಜಿಐಎಸ್) ಕಾರ್ಯಪಡೆ ರಚನೆ

* ಸಮುದಾಯ ಜ್ಞಾನ ಮತ್ತು ಪದ್ಧತಿಗಳು ಒಳಗೊಳ್ಳುವಂತೆ ಪಠ್ಯಕ್ರಮ ನವೀಕರಣ

* ವಿದ್ಯಾರ್ಥಿ ವೇತನ, ಸಾಲದ ಸಂಯೋಜನೆ, ವಿತರಣೆ, ನಿರ್ವಹಣೆ ಸಲುವಾಗಿ ವಿದ್ಯಾರ್ಥಿ ವೇತನ ಹಾಗೂ ಸಾಲ ಪ್ರಾಧಿಕಾರ ರಚನೆ

* ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿ ಕೇಂದ್ರಿತ ದೃಷ್ಟಿಕೋನ ಅಳವಡಿಕೆ

* ಸಂಪನ್ಮೂಲ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳುವಂತಹ ವಿಶಿಷ್ಟ ಹಾಗೂ ವೃತ್ತಿಪರ ಅರ್ಹತೆಗಳನ್ನು ಹೊಂದಿದ ಶೈಕ್ಷಣಿಕ ಪಡೆ ರಚನೆ

* ಸಂಶೋಧನೆ, ಉನ್ನತ ಶಿಕ್ಷಣ, ವೃತ್ತಿಪರ ಸಮ್ಮೇಳನಗಳಲ್ಲಿ ಭಾಗವಹಿಸುವಿಕೆ, ಶಿಕ್ಷಕರ ವಿನಿಮಯ ಮೊದಲಾದ
ಕಾರ್ಯಗಳನ್ನು ಕೈಗೊಳ್ಳುವ ದೃಷ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಶಿಕ್ಷಕರ ವೃತ್ತಿಪರ ಅಭಿವೃದ್ಧಿ

* ಫೆಲೋಶಿಪ್‌ಗಳ ಅಭಿವೃದ್ಧಿ

* ಶಿಕ್ಷಕರಿಗಾಗಿ ಕನ್ನಡದಲ್ಲಿ ವಿಷಯ ಸಾಮಗ್ರಿಗಳ ಸಿದ್ಧತೆ ಹಾಗೂ ಪ್ರಕಟಣೆಗಳನ್ನು ಹೊರತರುವುದು

* ಶಿಕ್ಷಣ ಸಂಸ್ಥೆಗಳ ಸಾಂಸ್ಥಿಕ ಮತ್ತು ಶೈಕ್ಷಣಿಕ ಮಾನದಂಡಗಳ ಮೇಲ್ವಿಚಾರಣೆಗಾಗಿ ಸ್ವಾಯತ್ತ ಮತ್ತು ಕ್ರಿಯಾಶೀಲ ಘಟಕ ಸ್ಥಾಪನೆ

* ಜ್ಞಾನದ ಸೃಷ್ಟಿ, ಪ್ರಸರಣ ಮತ್ತು ಅನ್ವಯ - ಇವುಗಳನ್ನು ಅಳತೆ ಮಾಡುವುದಕ್ಕಾಗಿ ಮತ್ತು ಇವುಗಳ ಮೇಲೆ 
ನಿಗಾ ಇಡಲು ಜಿಲ್ಲಾ ಮಟ್ಟದಲ್ಲಿ ಜ್ಞಾನ ಸೂಚ್ಯಂಕ ಅಭಿವೃದ್ಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.