ಬೆಂಗಳೂರು: ರಾಜ್ಯದಲ್ಲಿ ಶೇ 35 ರಿಂದ 40 ರಷ್ಟು ಮಳೆ ಕೊರತೆ ಆಗಿದ್ದು, ಬರಗಾಲ ಘೋಷಣೆ ಅನಿವಾರ್ಯ ಆಗಬಹುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಮಲೆನಾಡಿನಲ್ಲೂ ಮಳೆ ಕೊರತೆ ಆಗಿದೆ ಎಂದರು.
ಕಳೆದ 20 ದಿನಗಳಿಂದ ಮಳೆ ಆಗಿಲ್ಲ. ಇನ್ನು 10 ದಿನಗಳು ಮಳೆ ಆಗುವ ಸಾಧ್ಯತೆಯೂ ಇಲ್ಲ ಎಂದು ಹವಾಮಾನ ತಜ್ಞರು ವರದಿ ನೀಡಿದ್ದಾರೆ. ಸತತವಾಗಿ ಒಂದು ತಿಂಗಳು ಮಳೆ ಆಗದಿದ್ದರೆ, ಬರ ಘೋಷಿಸಬೇಕೆಂಬುದು ನಿಯಮಗಳಲ್ಲಿ ಇದೆ ಎಂದರು.
ಮೋಡ ಬಿತ್ತನೆಗೆ ಸರ್ಕಾರ ಸಿದ್ಧತೆ ನಡೆಸಿದೆ. ಅದಕ್ಕೆ ಪೂರಕ ಮೋಡಗಳೇ ಇಲ್ಲ ಎಂದು ಅವರು ತಿಳಿಸಿದರು.
ಕಾವೇರಿ ವಿಚಾರಣೆ: ಕಾವೇರಿ ನದಿ ವಿವಾದದ ವಿಚಾರಣೆ ನಾಳೆಯಿಂದ(ಮಂಗಳವಾರ) ಸುಪ್ರೀಂ ಕೋರ್ಟ್ನಲ್ಲಿ ಬರಲಿದೆ ಎಂದು ಅವರು ತಿಳಿಸಿದರು.
ರಾಜ್ಯದ ಪರವಾಗಿ ವಾದ ಮಂಡಿಸಲು ವಕೀಲರು ಸಿದ್ಧತೆ ನಡೆಸಿದ್ದಾರೆ. ಈ ಸಂಬಂಧ ಫಾಲಿ ಎಸ್.ನರಿಮನ್ ಜತೆ ಚರ್ಚಿಸಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.