ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳಲ್ಲಿ ಒಂದಾದ ‘ಸಂಸದರ ಆದರ್ಶ ಗ್ರಾಮ’ ಯೋಜನೆ ಅನುಷ್ಠಾನ ಮಾಡುವಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಇಬ್ಬರು ಸಚಿವರು, ಬಿಜೆಪಿಯ ಪ್ರಭಾವಿ ಸಂಸದರೂ ಆಸಕ್ತಿ ತೋರಿಲ್ಲ.
ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ ಇದೇ ವರ್ಷದ ಏಪ್ರಿಲ್ನಲ್ಲಿ ಎಲ್ಲ ಸಂಸದರಿಗೆ ಹಾಗೂ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪತ್ರ ಬರೆದು, ಯೋಜನೆಗೆ ಗ್ರಾಮಗಳನ್ನು ಆಯ್ಕೆ ಮಾಡಲು ಕೂಡಲೇ ಕ್ರಮವಹಿಸುವಂತೆ ಸೂಚಿಸಿತ್ತು. ಆಯ್ಕೆ ಮಾಡಿದ ಗ್ರಾಮ ಪಂಚಾಯಿತಿಯ ವಿವರವನ್ನು ‘ಸಂಸದ್ ಆದರ್ಶ ಗ್ರಾಮ ಯೋಜನಾ’ ಅಂತರ್ಜಾಲಕ್ಕೆ ಅಪ್ಲೋಡ್ ಮಾಡುವಂತೆ ಸೂಚಿಸಿತ್ತು.
‘ರಾಜ್ಯವನ್ನು ಪ್ರತಿನಿಧಿಸುವ ಎಂಟು ಲೋಕಸಭಾ ಸದಸ್ಯರು ಹಾಗೂ ಒಬ್ಬರು ರಾಜ್ಯಸಭಾ ಸದಸ್ಯರು ಮಾತ್ರ ಗ್ರಾಮವನ್ನು ಆಯ್ಕೆ ಮಾಡಿ, ಮಾಹಿತಿಯನ್ನು ಅಪ್ ಲೋಡ್ ಮಾಡಿದ್ದಾರೆ’ಎಂದು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
‘ಎಲ್ಲ ಸಂಸದರು ಹಾಗೂ ಆಯಾ ಜಿಲ್ಲಾಧಿಕಾರಿಗಳ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡಲಾಗುತ್ತಿದೆ. ಕೆಲವರು ಆಯ್ಕೆ ಮಾಡಿಲ್ಲ ಎಂದು ತಿಳಿಸಿದರೆ, ಇನ್ನೂ ಕೆಲವರು ತಾಂತ್ರಿಕ ತೊಂದರೆ ಇದೆ ಎಂದು ಹೇಳುತ್ತಿದ್ದಾರೆ’ ಎಂದು ಮೂಲಗಳು ಹೇಳಿವೆ.
ಮೂರನೇ ಹಂತಕ್ಕೆ ಆಯ್ಕೆ ಮಾಡಿದ ಸಚಿವೆ ನಿರ್ಮಲಾ:
ಕರ್ನಾಟಕವನ್ನು ಪ್ರತಿನಿಧಿಸುವ ವಾಣಿಜ್ಯ ಖಾತೆ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಮೂರನೇ ಹಂತದ ಆದರ್ಶ ಗ್ರಾಮ ಯೋಜನೆಗೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಮಲ್ಲನಾಯಕನಹಳ್ಳಿ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿದ್ದಾರೆ.
ಏನಿದು ಯೋಜನೆ?
ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು 2014ರ ಅಕ್ಟೋಬರ್ನಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆ ಪ್ರಕಟಿಸಿದ್ದರು.‘ಭವ್ಯ ಭಾರತದ ನಿರ್ಮಾಣವು ಗ್ರಾಮೋದ್ಧಾರದಿಂದಲೇ ಆರಂಭ ವಾಗಬೇಕು. ಪ್ರತಿಯೊಬ್ಬ ಸಂಸದರು 2019 ರೊಳಗೆ ತಲಾ ಮೂರು ಗ್ರಾಮ ಪಂಚಾಯಿತಿಗಳನ್ನು ಲೋಕಸಭಾ ಕ್ಷೇತ್ರಕ್ಕೆ ಮಾದರಿ ಗ್ರಾಮಗಳಾಗುವಂತೆ ರೂಪಿಸಬೇಕು’ ಎಂದು ಅವರು ಆಶಿಸಿದ್ದಾರೆ. 2016ರ ಅಂತ್ಯಕ್ಕೆ ಮೊದಲ ಹಂತ ಮುಗಿದು, 2017ರ ಜನವರಿಯಲ್ಲಿ ಎರಡನೇ ಹಂತದ ಯೋಜನೆಆರಂಭವಾಗಬೇಕಿತ್ತು. ಇದೇ ಜುಲೈನಲ್ಲಿ ಮೂರನೇ ಹಂತದ ಯೋಜನೆಯೂ ಆರಂಭವಾಗಬೇಕಿತ್ತು. ಆದರೆ, ಸಂಸದರ ನಿರಾಸಕ್ತಿಯಿಂದ ಎರಡನೇ ಹಂತದ ಗ್ರಾಮಗಳ ಆಯ್ಕೆಯೇ ನಡೆದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.