ADVERTISEMENT

ಸಮಾನ ಶಿಕ್ಷಣ ಪದ್ಧತಿಗೆ ಧೈರ್ಯ ಮಾಡಿ

ಸರ್ಕಾರಕ್ಕೆ ದೇವನೂರ ಮಹಾದೇವ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:30 IST
Last Updated 22 ಮಾರ್ಚ್ 2014, 19:30 IST
ಮೈಸೂರು ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ 94ನೇ ಘಟಿ­ಕೋ­ತ್ಸವದಲ್ಲಿ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದ ಬಳಿಕ ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಅವರು ಪ್ರಧಾನಮಂತ್ರಿ ಸಲಹೆಗಾರ ಸ್ಯಾಮ್‌ ಪಿತ್ರೋಡಾ ಅವರ ಕೈಕುಲುಕಿ ಅಭಿ­ನಂದಿಸಿದರು. ಕುಲಪತಿ ಪೊ.ಕೆ.ಎಸ್‌. ರಂಗಪ್ಪ, ಸಾಹಿತಿ ದೇವ­ನೂರ ಮಹಾದೇವ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ವೈ.ಕೆ. ಪುಟ್ಟಸೋಮೇಗೌಡ ಇದ್ದಾರೆ.
ಮೈಸೂರು ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ 94ನೇ ಘಟಿ­ಕೋ­ತ್ಸವದಲ್ಲಿ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದ ಬಳಿಕ ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಅವರು ಪ್ರಧಾನಮಂತ್ರಿ ಸಲಹೆಗಾರ ಸ್ಯಾಮ್‌ ಪಿತ್ರೋಡಾ ಅವರ ಕೈಕುಲುಕಿ ಅಭಿ­ನಂದಿಸಿದರು. ಕುಲಪತಿ ಪೊ.ಕೆ.ಎಸ್‌. ರಂಗಪ್ಪ, ಸಾಹಿತಿ ದೇವ­ನೂರ ಮಹಾದೇವ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ವೈ.ಕೆ. ಪುಟ್ಟಸೋಮೇಗೌಡ ಇದ್ದಾರೆ.   

ಮೈಸೂರು: ಕನಿಷ್ಠ 8ನೇ ತರಗತಿವರೆಗೆ ಶಿಕ್ಷಣದ ಖಾಸಗಿ ದಂಧೆಗೆ ಅವಕಾಶ ಮಾಡಿ­ಕೊಡದೇ, ಕಷ್ಟವಾದರೂ ಸಾರ್ವ­ತ್ರಿಕ ಸಮಾನ ಶಿಕ್ಷಣ ಪದ್ಧತಿ­ಯನ್ನು ಸರ್ಕಾರ ಜಾರಿಗೆ ತರುವ ಧೈರ್ಯ ಮಾಡಬೇಕು ಎಂದು ಸಾಹಿತಿ ದೇವನೂರ ಮಹಾದೇವ ಸಲಹೆ ನೀಡಿದರು.

ಇಲ್ಲಿನ ಮೈಸೂರು ವಿಶ್ವ­ವಿದ್ಯಾಲ­-ಯದ ಕ್ರಾಫರ್ಡ್‌ ಭವನದಲ್ಲಿ ಶನಿ­ವಾರ ನಡೆದ 94ನೇ ಘಟಿಕೋತ್ಸ­ವ­ದಲ್ಲಿ ಗೌರವ ಡಾಕ್ಟರೇಟ್‌ ಸ್ವೀಕರಿಸಿ ಮಾತ­ನಾಡಿದ ಅವರು, ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಹಾಗೂ ಸಾಮಾ­ಜಿಕ ನ್ಯಾಯಕ್ಕೆ ಅನುಗುಣವಾಗಿ ಮಕ್ಕ­ಳನ್ನು ರೂಪಿಸಬೇಕಾಗಿದೆ. ಶಿಕ್ಷಣ ಪದ್ಧ­ತಿಯ ಮೂಲಕ ಇದು ಸಾಧ್ಯ­ವಿದ್ದು, ಈಗಾಗಲೇ ಸಾಕಷ್ಟು ವಿಳಂಬ­ವಾಗಿದೆ ಎಂದರು.

ಪ್ರಾಥಮಿಕ ಶಿಕ್ಷಣದಲ್ಲಾದರೂ ಸಮೀಪ ಮತ್ತು ಸಮಾನ ಶಿಕ್ಷಣ ಪದ್ಧತಿ ಇಲ್ಲ. ಎಳೆಯ ಮಕ್ಕಳಲ್ಲಿ ಭಿನ್ನಭಾವ, ಅಂತಸ್ತು, ತಾರತಮ್ಯ ಉಂಟು ಮಾಡುವ ಚಾತುರ್ವರ್ಣದ ಸೋಂಕಿ­ನಂತಿರುವ ಪಂಚವರ್ಣ ಶಿಕ್ಷಣ ಪದ್ಧತಿ ಇದೆ. ಇದೇ ವ್ಯವಸ್ಥೆ ನಾಳಿನ  ಅಸಮಾನ ಭಾರತಕ್ಕೆ ಕಾರಣವಾಗುತ್ತದೆ. ಇಲ್ಲಿನ ಸಾಮಾ­ಜಿಕ ವ್ಯವಸ್ಥೆಗೆ ಎಲ್ಲ ಜಾತಿ– ವರ್ಗದ ಮಕ್ಕಳು ಜೊತೆಗೂಡಿ ಒಡ­ನಾಡುವುದೇ ಭಾರತಕ್ಕೆ ಬಲು ದೊಡ್ಡ ಶಿಕ್ಷಣ ಎಂಬ ಕನಿಷ್ಠ ತಿಳಿವಳಿಕೆ­ಯಾ­ದರೂ ನಮಗಿರಬೇಕಾಗಿತ್ತು.

ಸಮಾನ ಶಿಕ್ಷಣ ಪದ್ಧತಿಯಲ್ಲಿ ಉಂಟಾಗುವ ಸ್ಥಳೀಯ ಎಚ್ಚರದಿಂದಾಗಿ ಯಾವುದೇ ಕಳಪೆ ಸರ್ಕಾರಿ ಶಾಲೆಯೂ ತಂತಾನೇ ಉನ್ನ­ತೀಕರಣಗೊಳ್ಳುತ್ತದೆ ಎಂಬುದಕ್ಕೆ ನಾವು ಕುರುಡಾಗಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.
ವಿಶ್ವಬ್ಯಾಂಕ್‌ ಮತ್ತು ಅಂತರ­ರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂ­ಎಫ್‌) 1990ರ ದಶಕದಲ್ಲಿ ಸಂರಚ­ನಾತ್ಮಕ ಹೊಂದಾಣಿಕೆ ನೀತಿಯ ಅಡಿ ಶಿಕ್ಷಣದ ಖರ್ಚು–ವೆಚ್ಚವನ್ನು ಕಡಿಮೆ ಮಾಡಬೇಕು ಎಂದು ಭಾರತಕ್ಕೆ ನಿರ್ದೇ­ಶನ ನೀಡಿತ್ತು.

ಮನುಷ್ಯತ್ವ ಇಲ್ಲದ ದುಡ್ಡಿಗೆ, ಬಂಡವಾಳಶಾಹಿಗೆ ಶಿಕ್ಷಣವೂ ಲಾಭ­ರಹಿತ ಅನುತ್ಪಾದಕ ಕ್ಷೇತ್ರವಾಗಿ ಕಾಣಿ­ಸುತ್ತದೆ. ಇದಕ್ಕೆ ಅನುಗುಣವಾಗಿ ನಮ್ಮ ಸರ್ಕಾರ ಕೂಡ ಶಿಕ್ಷಣ ಕ್ಷೇತ್ರ­ವನ್ನು ಖಾಸಗಿಯವರ ಬಾಯಿಗೆ ಹಾಕುತ್ತಾ ದುಡ್ಡು ಮಾಡುವ ದಂಧೆ­ಯನ್ನಾಗಿಸಿಬಿಟ್ಟಿದೆ. ಇದು ಉದ್ಧಾರವೇ, ಅಧಃಪತ­ನವೇ ಎಂಬುದಕ್ಕೆ ವಿದ್ಯಾವಂತ ಸಮು­ದಾಯ ಉತ್ತರ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಸಾಮಾಜಿಕ ಮತ್ತು ಆರ್ಥಿಕ ಅಸ­ಮಾ­ನತೆ ಮುಂದುವರಿದು ರಾಜಕೀಯ ಪ್ರಜಾಸತ್ತೆಗೆ ಆಪತ್ತು ಬರುತ್ತದೆ ಎಂಬ ಅಂಬೇಡ್ಕರ್‌ ಅವರ ಕಳ­ವಳ ಈಗ ನಿಜ­ವಾ­ಗಿದೆ. ಇಂತಹ ಆಪತ್ತಿನ ಅಂಚಿಗೆ ದೇಶ ತಲುಪಿದ್ದು, ಯಮ­ಪಾಶ ಎದುರಿ­ಗಿದೆ. ಸಾಮಾಜಿಕ ಪ್ರತ್ಯೇಕತೆ­ಯನ್ನು ಹೆಚ್ಚಿ­ಸುವ ಜಾತಿ ‘ಟೌನ್‌­ಷಿಪ್‌್ ಕ್ಯಾನ್ಸರ್‌’­ನಂತೆ ಹೆಚ್ಚು­ತ್ತಿದೆ. ಜತೆಗೆ ರಾಷ್ಟ್ರದ ಅರ್ಧ­ದಷ್ಟು ಆಸ್ತಿ ಕೇವಲ 100 ಕುಟುಂಬ­ಗಳ ವಶ­ದ­ಲ್ಲಿದೆ. 100 ಕೋಟಿಗೆ ಅರ್ಧ ಸಂಪತ್ತಾ­ದರೆ, ನೂರು ಜನರಿಗೆ ಇನ್ನರ್ಧ! ಹೀಗಾ­ದರೆ ಪ್ರಜಾ­ಸತ್ತೆ, ಜನತಂತ್ರ ವ್ಯವಸ್ಥೆ ಉಳಿ­ಯು­ತ್ತದೆಯೇ ಎಂದು ಪ್ರಶ್ನಿಸಿದರು.

ರಾಜ್ಯಪಾಲ ಹಂಸರಾಜ್‌ ಭಾರ­ದ್ವಾಜ್‌, ಪ್ರಧಾನಮಂತ್ರಿ ಸಲಹೆಗಾರ ಸ್ಯಾಮ್‌ ಪಿತ್ರೋಡಾ, ಕೃಷಿಕ್‌ ಸರ್ವೋ­ದಯ ಫೌಂಡೇಷನ್‌ ಸಂಸ್ಥಾಪಕ ನಿವೃತ್ತ ಐಎಎಸ್‌ ಅಧಿಕಾರಿ ವೈ.ಕೆ. ಪುಟ್ಟ­ಸೋಮೇಗೌಡ, ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ, ಕುಲಸಚಿವ ಪ್ರೊ.ಸಿ. ಬಸವ­ರಾಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.