ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿ ಆಯ್ಕೆಯಲ್ಲಿ ತಲೆದೋರಿರುವ ಬಿಕ್ಕಟ್ಟು ಶಮನಕ್ಕೆ ವರಿಷ್ಠರು ಇಂದು ಅಂತಿಮ ಕಸರತ್ತು ನಡೆಸುತ್ತಿದ್ದಾರೆ.
ಈ ಸಂಬಂಧ ನಗರದ ಕ್ಯಾಪಿಟಲ್ ಹೋಟೆಲ್ ನಲ್ಲಿ ಇದೀಗ ಪಕ್ಷದ ಶಾಸಕಾಂಗ ಸಭೆ ಆರಂಭವಾಗಿದೆ. ಲೀ ಮೆರಿಡಿಯನ್ ಹೋಟೆಲ್ ನಲ್ಲಿ ತಂಗಿದ್ದ ವರಿಷ್ಠರಾದ ಅರುಣ್ ಜೇಟ್ಲಿ ಹಾಗೂ ರಾಜನಾಥ ಸಿಂಗ್ ಅವರು ಕ್ಯಾಪಿಟಲ್ ಹೋಟೆಲ್ ಗೆ ಆಗಮಿಸಿದ್ದಾರೆ.
ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ, ಅನಂತ ಕುಮಾರ್ ಸೇರಿದಂತೆ ಬಿಜೆಪಿಯ ಶಾಸಕರು ಹಾಗೂ ಸಂಸದರು ಈ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ. ಈ ನಡುವೆ ಪರ ವಿರೋಧ ಲಾಭಿ ಹೆಚ್ಚಾಗಿದೆ. ಹೀಗಾಗಿ ಸಧಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್ ಇಬ್ಬರಲ್ಲಿ ಯಾರು ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುವುದು ಇನ್ನೂ ಗೌಪ್ಯವಾಗಿಯೇ ಉಳಿದಿದೆ.
ಯಡಿಯೂರಪ್ಪ ಹಾಗೂ ಈಶ್ವರಪ್ಪ ಸೇರಿದಂತೆ ಎರಡೂ ಬಣಗಳ ನಾಯಕರ ಜತೆ ವರಿಷ್ಠರು ಮಾತುಕತೆ ನಡೆಸಿದ್ದಾರೆ.
ಶಾಸಕರು ಹಾಗೂ ಸಂಸದರನ್ನು ಹೊರತುಪಡಿಸಿ ಅವರ ಆಪ್ತ ಕಾರ್ಯದರ್ಶಿಗಳು, ಸಹಾಯಕರನ್ನು ಸಭೆಗೆ ಕರೆದುಕೊಂಡು ಬಾರದಂತೆ ಸೂಚಿಸಲಾಗಿದೆ. ಕ್ಯಾಪಿಟಲ್ ಹೋಟೆಲ್ ಎದುರು ಭಾರೀ ಭಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಭದ್ರತೆಯ ನೇತೃತ್ವವನ್ನು ಸ್ವತಃ ನಗರ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ವಹಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.