ADVERTISEMENT

‘ಆಧಾರ್‌’ ಅಪ್ರಯೋಜಕ: ಅನಂತಕುಮಾರ್‌

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ಬೆಂಗಳೂರು: ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ‘ಆಧಾರ್‌’ ಯೋಜನೆಯಲ್ಲೂ ಅಕ್ರಮ ನಡೆದಿದೆ. ಇದೊಂದು ನಿಷ್ಪ್ರ­ಯೋಜಕ ಯೋಜನೆ ಎಂದು ಬೆಂಗ­ಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ­ಕುಮಾರ್‌ ಮಂಗಳವಾರ ಇಲ್ಲಿ ಹೇಳಿದರು.

ಯೂತ್‌ ಫಾರ್‌ ಡೆಮಾಕ್ರಸಿ ಸಂಸ್ಥೆ ಆಯೋಜಿಸಿದ್ದ ಕಾಲೇಜು ವಿದ್ಯಾರ್ಥಿಗಳ ಜತೆಗಿನ ಸಂವಾದ ಕಾರ್ಯ­ಕ್ರಮ­ದಲ್ಲಿ ಅವರು ಮಾತನಾಡಿದರು.

‘ಒಂದು ದೇಶದ ವ್ಯಕ್ತಿ ಮತ್ತೊಂದು ದೇಶದ ಗಡಿಯನ್ನು ಅಕ್ರಮವಾಗಿ ಪ್ರವೇಶಿ­ಸಿದರೆ ಅಂತಹವರನ್ನು ಶಿಕ್ಷೆಗೆ ಗುರಿ­ಪಡಿಸ­­ಲಾಗುತ್ತದೆ. ಆದರೆ, ನಮ್ಮಲ್ಲಿ ವಿದೇಶದಿಂದ ಬಂದ­ವರಿಗೂ ಆಧಾರ್‌ ಸಂಖ್ಯೆ ನೀಡಲಾಗುತ್ತಿದೆ. ಬಾಂಗ್ಲಾ­ದೇಶ­ದಿಂದ ಬರುವ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಅವರೇ ಚುನಾವಣೆಗೆ ಸ್ಪರ್ಧಿಸಿ, ಸಚಿವ­ರಾದರೂ ಆಶ್ಚರ್ಯ ಇಲ್ಲ’ ಎಂದು ವ್ಯಂಗ್ಯವಾಡಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗಗಳಲ್ಲಿನ ಬಡವರಿಗೆ ಕಾಲೇಜು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸ­ಲಾಗು­ವುದು ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ವಕ್ತಾರೆ ಮೀನಾಕ್ಷಿ ಲೇಖಿ ಮಾತನಾಡಿ, ‘ನಮ್ಮ ಪಕ್ಷ ಕೇಂದ್ರ­ದಲ್ಲಿ ಅಧಿಕಾರಕ್ಕೆ ಬಂದರೆ ಖಾಸಗಿ ಮತ್ತು ಸರ್ಕಾರಿ ಶಾಲಾ– ಕಾಲೇಜು­ಗಳಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡಲಾಗುವುದು’ ಎಂದರು.
ಸಂವಾದದಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಸೇರಿ ಇತರರು  ಪಾಲ್ಗೊಂಡಿದ್ದರು.

ನಿರಾಧಾರ...
‘ಗುರುತಿನ ಸಂಖ್ಯೆ ನೀಡುವುದನ್ನು ಆಧಾರ್‌ ಎನ್ನುವುದಕ್ಕಿಂತ ನಿರಾಧಾರ ಎನ್ನು­ವುದೇ ಉತ್ತಮ. ಇದನ್ನು ಸುಪ್ರೀಂ­ಕೋರ್ಟ್ ಕೂಡ ತಿರಸ್ಕರಿಸಿದೆ. ಈ ಸಲುವಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದು ಕೂಡ ವ್ಯರ್ಥ ಕಸರತ್ತು.
– ಅನಂತಕುಮಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.