ADVERTISEMENT

‘ವಿಶ್ವಬಂಧುತ್ವ ಇಂದಿನ ಅಗತ್ಯ’

ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2014, 19:30 IST
Last Updated 6 ಫೆಬ್ರುವರಿ 2014, 19:30 IST
ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಗುರುವಾರ ಆರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಭ್ರಮರಿ ಅಂತರರಾಷ್ಟ್ರೀಯ ಪ್ರಯೋಗಶೀಲ ತಂಡದವರಿಂದ ನೃತ್ಯ ವೈಭವ
ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಗುರುವಾರ ಆರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಭ್ರಮರಿ ಅಂತರರಾಷ್ಟ್ರೀಯ ಪ್ರಯೋಗಶೀಲ ತಂಡದವರಿಂದ ನೃತ್ಯ ವೈಭವ   

ಶಿಗ್ಗಾವಿ (ಹಾವೇರಿ ಜಿಲ್ಲೆ): ಮರುಳಸಿದ್ಧರು ನೀಡಿ­ರುವ ವಿಶ್ವಬಂಧುತ್ವದ ಸಂದೇಶವನ್ನು ಸಾಕಾರಗೊಳಿ­ಸುವುದರ ಜೊತೆಗೆ ಅದನ್ನು ಜಗತ್ತಿಗೆ ಸಾರುತ್ತಿರು­ವುದು ತರಳಬಾಳು ಹುಣ್ಣಿಮೆ ಹೆಗ್ಗಳಿಕೆಯಾಗಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಅಭಿಪ್ರಾಯಪಟ್ಟರು.ಗುರುವಾರ ಆರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.

ಮನುಷ್ಯ– ಮನುಷ್ಯರಲ್ಲಿ ಸಂಬಂಧಗಳು ಕಡಿದು ಹೋಗುತ್ತಿರುವ ಇಂದಿನ ದಿನಗಳಲ್ಲಿ ಜಗತ್ತಿನಲ್ಲಿರುವ ಪ್ರತಿಯೊಬ್ಬರೂ ಒಂದೇ ಎನ್ನುವ ವಿಶ್ವಬಂಧುತ್ವ ಸಂದೇಶ  ಹೆಚ್ಚು ಪ್ರಸ್ತುತವಾಗಿದೆ ಎಂದರು.

ಪ್ರಾಣಿ ಬಲಿಯಂತಹ ಹೀನ ಕೃತ್ಯವನ್ನು 12ನೇ ಶತಮಾನದಲ್ಲಿ ನಿಯಂತ್ರಿಸಿದ ಶ್ರೇಯಸ್ಸು ಮರುಳ­ಸಿದ್ಧ­ರಿಗೆ ಸಲ್ಲುತ್ತದೆ. ಅವರು ಹಾಕಿಕೊಟ್ಟ ಮಾರ್ಗ­ವನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಸರ್ಕಾರಗಳು ಚಿಂತನೆ ನಡಸಬೇಕು ಎಂದು ಸಲಹೆ ಮಾಡಿದರು.

ಅಜ್ಞಾನ, ಅಂಧಃಕಾರ, ಮೂಢನಂಬಿಕೆಯಂತಹ ಸಾಮಾಜಿಕ ಪಿಡುಗುಗಳಿಂದ ಹೊರಬಂದು, ಪರಿ­ಪೂರ್ಣ­ತೆ­ಯಡೆಗೆ ಸಾಗಿ ಸಾಮಾಜಿಕ ಸಾಮರಸ್ಯ ಮೂಡಿ­ಸುವಲ್ಲಿ ತರಳಬಾಳು ಹುಣ್ಣಿಮೆ ಸಹಕಾರಿ­ಯಾಗಿದೆ. ಈ ಸಂದೇಶವನ್ನು 21ನೇ ಶತಮಾನದಲ್ಲಿ ಜಗತ್ತಿಗೆ ಪಸರಿಸುವಲ್ಲಿ ಡಾ.ಶಿವಮೂರ್ತಿ ಶಿವಾ­ಚಾರ್ಯರ ಶ್ರೀಗಳ ಪಾತ್ರ ದೊಡ್ಡದು ಎಂದರು.

ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಮಾತ­ನಾಡಿ, ಸರ್ವರನ್ನೂ ಮಾನವೀಯ ದೃಷ್ಟಿಯಲ್ಲಿ ಒಂದುಗೂಡಿಸಿ ಈ ಜಗತ್ತಿಗೆ ಸದ್ಧರ್ಮ, ಸಂಸ್ಕಾರ­ವನ್ನು ಸಿರಿಗೆರೆ ಶ್ರೀಮಠ ನೀಡಿದೆ. ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಅಷ್ಟೇ ಅಲ್ಲ. ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟು­ವಟಿಕೆಗಳಿಗೆ  ಜೀವ ತುಂಬಿ, ನಮ್ಮಂತಹ ನೂರಾರು ಕಲಾವಿರಿಗೆ ಬದುಕು ಕಟ್ಟಿಕೊಟ್ಟಿದೆ ಎಂದರು.

ತರಳು–ಬಾಳು ವಿಷಯ ಕುರಿತು ಡಾ. ಲೋಕೇಶ ಅಗಸನಕಟ್ಟಿ ಉಪನ್ಯಾಸ ನೀಡಿದರು.  ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಅವರು 9 ದಿನಗಳ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಚಾಲನೆ ನೀಡಿದರು. ಸಾಣೆಹಳ್ಳಿ ಶ್ರೀಗಳು, ಸಂಗನಬಸವ ಶ್ರೀಗಳು, ಸಚಿವ ಎಚ್‌.ಆಂಜ­ನೇಯ, ಮಾಜಿ ಸಚಿವರಾದ ಸಿ.ಎಂ.ಉದಾಸಿ, ವಿ.ಸೋಮಣ್ಣ ಮುಂತಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.