ADVERTISEMENT

1.22 ಲಕ್ಷ ಹೆಕ್ಟೇರ್‌ ಬೆಳೆ ಹಾಳು

ಅಕಾಲಿಕ ಮಳೆ ತಂದ ಗೋಳು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 19:47 IST
Last Updated 10 ಮಾರ್ಚ್ 2014, 19:47 IST

ಬೆಂಗಳೂರು: ಇತ್ತೀಚೆಗೆ ಬಿದ್ದ ಅಕಾಲಿಕ ಮಳೆ­ಯಿಂದಾಗಿ ಸುಮಾರು 1.22 ಲಕ್ಷ ಹೆಕ್ಟೇರ್‌ ಕೃಷಿ ಮತ್ತು 14,565 ಹೆಕ್ಟೇರ್‌ ತೋಟಗಾರಿಕಾ ಬೆಳೆಗಳು ಹಾಳಾ­ಗಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.



ಗುಲ್ಬರ್ಗ ಮತ್ತು ಬೆಳಗಾವಿ ವಿಭಾ­ಗದ ಒಂಬತ್ತು ಜಿಲ್ಲೆಗಳಲ್ಲಿ ಆಗಿರುವ ನಷ್ಟದ ಬಗ್ಗೆ ಪ್ರಕೃತಿ ವಿಕೋಪ ನಿರ್ವ­ಹಣಾ ಘಟಕ ಮಾಹಿತಿ ಸಂಗ್ರಹಿಸುತ್ತಿದೆ.

ಎಷ್ಟು ಕೋಟಿ ರೂಪಾಯಿ ಬೆಳೆ ನಷ್ಟವಾಗಿದೆ ಎಂಬುದು ಇನ್ನೂ ನಿಖರವಾಗಿ ತಿಳಿಯುತ್ತಿಲ್ಲ ಎಂದು ಮೂಲ­ಗಳು ಹೇಳಿವೆ. ಕೃಷಿ, ತೋಟ­ಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸರ್ವೇ ನಡೆಸುತ್ತಿದ್ದು, ವರದಿ­ಗಳು ಬಂದ ನಂತರವೇ ಪರಿಹಾರದ ಬಗ್ಗೆ ಗಮನಹರಿಸಲಿವೆ ಎಂದು ಗೊತ್ತಾಗಿದೆ. ಲಭ್ಯ ಇರುವ ಮೂಲಗಳ ಪ್ರಕಾರ ಇದು­ವರೆಗೂ 11 ಮಂದಿ ಸತ್ತಿದ್ದಾರೆ. 157 ಜಾನುವಾರುಗಳು ಅಸುನೀಗಿವೆ. 551 ಮನೆಗಳು ಭಾಗಶಃ ಹಾನಿ­ಗೊಳಗಾಗಿವೆ.

ಸಚಿವರ ಸಭೆ: ಕೃಷಿ ಸಚಿವ ಕೃಷ್ಣ ಬೈರೇ­ಗೌಡ ಅವರು ಸೋಮವಾರ ಅಧಿಕಾರಿ­ಗಳ ಸಭೆ ನಡೆಸಿ, ಬೆಳೆ ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅವರು ಅಧಿಕಾರಿಗಳಿಗೆ ಸೂಚಿಸಿದರು ಎಂದು ಗೊತ್ತಾಗಿದೆ.
ರೂ. 200 ಕೋಟಿ: ಜಿಲ್ಲಾಧಿಕಾರಿಗಳ ಬಳಿ ಸುಮಾರು ರೂ. 200 ಕೋಟಿ ಇದ್ದು, ಅದನ್ನು ತುರ್ತು ಪರಿಹಾರ ಕ್ರಮಗಳಿಗೆ ಬಳ­ಸಲು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿಜಾಪುರ ಜಿಲ್ಲೆ­ಯಲ್ಲಿ ಅತಿ ಹೆಚ್ಚು ಅಂದರೆ, ಸುಮಾರು 4,113 ಹೆಕ್ಟೇರ್‌ ಪ್ರದೇಶದಲ್ಲಿನ ದ್ರಾಕ್ಷಿ ಬೆಳೆ ಹಾಳಾಗಿದೆ.

ಪರಿಹಾರ ಎಷ್ಟೆಷ್ಟು ಸಿಗಬಹುದು?
ನಿಯಮ ಪ್ರಕಾರ ದ್ರಾಕ್ಷಿ, ದಾಳಿಂಬೆ, ಮಾವು, ಅಡಿಕೆ, ತೆಂಗು ಇತ್ಯಾದಿ ವಾರ್ಷಿಕ ಬೆಳೆಗಳ ನಷ್ಟಕ್ಕೆ ಹೆಕ್ಟೇರ್‌ಗೆ ರೂ. 12,000 ಪರಿಹಾರ ನೀಡಲು ಅವಕಾಶ ಇದೆ. ಮಳೆಯಾಶ್ರಿತ ಬೆಳೆಗಳಿಗೆ ಹೆಕ್ಟೇರ್‌ಗೆ ರೂ. 4,500, ನೀರಾವರಿ ಬೆಳೆ ಹಾನಿಗೆ ರೂ. 8,000 ಪರಿಹಾರ ನೀಡಲು ಅವಕಾಶ ಇದೆ.

‘ಪರಿಹಾರ ನೀಡಲು ಅಡ್ಡಿ ಇಲ್ಲ’
ಮಳೆಯಿಂದ ಬೆಳೆ ಹಾನಿಯಾಗಿರುವ ಕಡೆ ಪ್ರಕೃತಿ ವಿಕೋಪ ನಿಧಿ­ಯಿಂದ ಪರಿ­ಹಾರ ನೀಡಲು ಚುನಾವಣಾ ನೀತಿ ಸಂಹಿತೆ ಅಡ್ಡಿ ಆಗುವುದಿಲ್ಲ. ಚುನಾವಣಾ ಆಯೋ­ಗದ ಅನುಮತಿ ಪಡೆದು ಸಂತ್ರಸ್ತರಿಗೆ ನೆರವು ನೀಡಬಹುದು ಎಂದು ಮುಖ್ಯ ಚುನಾವಣಾಧಿಕಾರಿ ಅನಿಲ್‌ ಕುಮಾರ್‌ ಝಾ ತಿಳಿಸಿದರು.

ಪರಿಹಾರ ಬಿಡುಗಡೆಗೆ ಶೆಟ್ಟರ್‌ ಆಗ್ರಹ
ರಾಜ್ಯ ಸರ್ಕಾರ ಲೋಕಸಭಾ ಚುನಾ­ವಣೆಯ ಗುಂಗಿನಿಂದ ಹೊರ­ಬಂದು ಅಕಾಲಿಕ ಮಳೆಯಿಂದ ನಷ್ಟಕ್ಕೆ ತುತ್ತಾಗಿರುವ ರೈತರ ನೆರ­ವಿಗೆ ಧಾವಿಸಬೇಕು ಎಂದು ವಿಧಾನ­ಸಭೆ ವಿರೋಧಪಕ್ಷ ನಾಯಕ ಜಗದೀಶ ಶೆಟ್ಟರ್‌ ಸೋಮವಾರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಭಾರಿ ಮಳೆಯಿಂದಾಗಿ ಅಪಾರ ನಷ್ಟ ಆಗಿದೆ. ರೈತರು ಕೂಡ ಸತ್ತಿ­ದ್ದಾರೆ. ಹೀಗಾಗಿ ತಕ್ಷಣ ಪರಿಹಾರ ನೀಡ­ಬೇಕು. ಪ್ರಾಣ ಕಳೆದುಕೊಂಡ ರೈತರ ಕುಟುಂಬ ವರ್ಗಕ್ಕೆ ತಲಾ 20 ಲಕ್ಷ ಪರಿಹಾರ ನೀಡಬೇಕು ಎಂದೂ ಅವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾ­ಯಿಸಿದ್ದಾರೆ.

ನೆರವು ನೀಡುವಂತೆ ಕೇಂದ್ರ ಸರ್ಕಾರದ ಮೇಲೂ ಒತ್ತಡ ಹೇರಬೇಕು ಎಂದು ವರು ಆಗ್ರಹಪಡಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಶೆಟ್ಟರ್ ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT