ರಾಯಚೂರು: ಮಂತ್ರಾಲಯ ಗುರು ರಾಘವೇಂದ್ರ ತೀರ್ಥರ 342ನೇ ಆರಾಧನಾ ಮಹೋತ್ಸವ ಆ. 19ರಿಂದ 25ರ ವರೆಗೆ ಮಠದಲ್ಲಿ ನಡೆಯಲಿದೆ. ಇದರ ಅಂಗವಾಗಿ 19 ರಿಂದ 25ರವರೆಗೆ ಸಪ್ತರಥೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಯತೀಂದ್ರತೀರ್ಥ ಸ್ವಾಮೀಜಿ ಹಾಗೂ ಸುಬುದೇಂದ್ರ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
19ರಂದು ಧ್ವಜಾರೋಹಣ, ಗೋ, ಗಜ ಮತ್ತು ಲಕ್ಷ್ಮೀ ಪೂಜೆ, ಧಾನ್ಯ ಪೂಜೆ ಹಾಗೂ ಪ್ರಭ ಉತ್ಸವ ನಡೆಯಲಿದೆ. 20 ರಂದು ಋಗ್ವೇದ, ಯರ್ಜುವೇದ, ನಿತ್ಯ ಮತ್ತು ನೂತನ ಉಪಕರ್ಮ, ಶಾಖೋತ್ಸವ ಹಾಗೂ ರಜತ ಮಂಟಪೋತ್ಸವ ಕಾರ್ಯಕ್ರಮ ನಡೆಯಲಿದೆ.
21ರಂದು ಪೂರ್ವಾರಾಧನೆ ದಿನದಂದು ಸಿಂಹ ವಾಹನೋತ್ಸವ ನಡೆಯಲಿದೆ. 22ರಂದು ಮಧ್ಯಾರಾಧನೆ ದಿನದಂದು ಸುವರ್ಣ ರಥೋತ್ಸವ ನಡೆಯಲಿದೆ. 23ರಂದು ಉತ್ತರಾರಾಧನೆ ದಿನದಂದು ಮಹಾರಥೋತ್ಸವ ಕಾರ್ಯಕ್ರಮ ನಡೆಯಲಿದೆ. 24ರಂದು ಸುಜ್ಞಾನೇಂದ್ರ ತೀರ್ಥರ ಆರಾಧನೆ ನಡೆಯಲಿದೆ. 25 ರಂದು ಸರ್ವ ಸಮರ್ಪಣೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮ ನಡೆಯಲಿದೆ.
ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ಮಠದಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಪ್ರಶಸ್ತಿ ಪ್ರದಾನ: ರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ಪಿ.ಎಸ್.ಲಕ್ಷ್ಮೀನಾರಾಯಣ ಉಪಾಧ್ಯಾಯ ಅವರಿಗೆ ಮರಣೋತ್ತರವಾಗಿ ನೀಡಲಾಗುತ್ತಿದೆ. ಸಮಾಜ ಸೇವೆ ಗುರುತಿಸಿ ಸುಧೀಂದ್ರ, ವಾಮನ ಅವರಿಗೆ ಜಂಟಿಯಾಗಿ ರಾಘವೇಂದ್ರ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಆಸ್ಥಾನ ವಿದುಷಿ ಪ್ರಶಸ್ತಿಯನ್ನು ಕಲಾವಿದೆ ಎ. ಕನ್ಯಾಕುಮಾರಿ ಅವರಿಗೆ 21ರಂದು ನಡೆಯುವ ಪೂರ್ವಾರಾಧನೆ ಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.