ADVERTISEMENT

20ರಂದು ಕೊಡಗಿಗೆ ಬೃಂದಾ

ಕಸ್ತೂರಿ ರಂಗನ್‌ ವರದಿ ಬಗ್ಗೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 19:44 IST
Last Updated 17 ಡಿಸೆಂಬರ್ 2013, 19:44 IST
20ರಂದು ಕೊಡಗಿಗೆ ಬೃಂದಾ
20ರಂದು ಕೊಡಗಿಗೆ ಬೃಂದಾ   

ಮಡಿಕೇರಿ: ಇಲ್ಲಿಗೆ ಸಮೀಪದ ಸಿದ್ದಾಪುರದಲ್ಲಿ ಇದೇ 20, 21ರಂದು ನಡೆಯಲಿರುವ ಆದಿವಾಸಿ– ಬುಡಕಟ್ಟು ಜನರ ರಾಜ್ಯ ಮಟ್ಟದ ಎರಡನೇ ಸಮಾವೇಶದಲ್ಲಿ ಆದಿವಾಸಿ ಹಕ್ಕುಗಳ ಹೋರಾಟಗಾರ್ತಿ ಹಾಗೂ ಕಮ್ಯುನಿಸ್ಟ್‌ ಪಕ್ಷದ ನಾಯಕಿ ಬೃಂದಾ ಕಾರಟ್‌ ಭಾಗವಹಿಸಲಿದ್ದಾರೆ.

ಪಶ್ಚಿಮಘಟ್ಟದ ಪ್ರದೇಶದಲ್ಲಿ ವಾಸವಿರುವ ಆದಿವಾಸಿಗಳ ಸಮಸ್ಯೆ­ಗಳು ಹಾಗೂ ಕೇಂದ್ರ ಸರ್ಕಾರವು ಅಂಗೀಕರಿಸಿರುವ ಕಸ್ತೂರಿ ರಂಗನ್‌ ವರದಿಯಿಂದ ಕೊಡಗು ಜಿಲ್ಲೆಯ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗು­ವುದು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಂಚಾಲನಾ ಸಮಿತಿಯ ಸದಸ್ಯ ಎಸ್‌.ವೈ. ಗುರುಶಾಂತ್‌ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಡಿ.20ರಂದು ಬೆಳಿಗ್ಗೆ 11.30ಕ್ಕೆ ನೆಲ್ಯಹುದಿಕೇರಿಯಿಂದ ಸಿದ್ದಾಪುರ­ದವರೆಗೆ ಆದಿವಾಸಿಗಳ ಬೃಹತ್‌ ಮೆರ­ವಣಿಗೆ ಹೊರಡ­ಲಿದೆ. ಸಿದ್ದಾಪುರದ ಸ್ವರ್ಣ ಮಹಲ್‌­ನಲ್ಲಿ ಸಮಾವೇಶ ನಡೆಯಲಿದೆ. ಬೃಂದಾ ಕಾರಟ್‌ ಜೊತೆ ಆದಿವಾಸಿ ಅಧಿಕಾರ್‌ ರಾಷ್ಟ್ರೀಯ ಮಂಚ್‌ನ ಅಖಿಲ ಭಾರತ ಸಹ–ಸಂಚಾಲಕ ಡಾ.ಬಾಬುರಾವ್‌ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಅರಣ್ಯ ಹಕ್ಕು ಕಾಯ್ದೆ ಜಾರಿ, ಬುಡಕಟ್ಟು ಜನರ ವಿಶೇಷ ಯೋಜನೆ, ಶಿಕ್ಷಣ, ಉದ್ಯೋಗ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಚಿಂತನ–ಮಂಥನ ನಡೆಯಲಿದೆ. ರಾಜ್ಯದ 12 ಜಿಲ್ಲೆಗಳ ಆದಿವಾಸಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯೂ, ಕಾರ್ಯಾ­ಧ್ಯಕ್ಷ ಕೆ.ಆರ್‌. ವಿದ್ಯಾಧರ್‌, ಪ್ರಧಾನ ಕಾರ್ಯದರ್ಶಿ ಕಿಶೋರ್‌ ಕುಟ್ಟಪ್ಪ ಕಾರ್ಯದರ್ಶಿ ಪಿ.ಆರ್‌. ಭರತ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.