ಬೆಂಗಳೂರು: ವಿಶ್ವೇಶ್ವರಯ್ಯ ಜಲ ನಿಗಮ ವ್ಯಾಪ್ತಿಯಲ್ಲಿ 159 ಕೋಟಿ ಮೊತ್ತದ ಕಾಮಗಾರಿ ಹಂಚಿಕೆಯಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ 25 ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಪಾದಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಗುತ್ತಿಗೆ ನೀಡುವಾಗ ತ್ರಿಪುರ, ಮಣಿಪುರ ರಾಜ್ಯಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಇದೆ ನಕಲಿ ಪ್ರಮಾಣಪತ್ರ ಸಲ್ಲಿಸಿದ ಎನ್ ಪಿಸಿಸಿ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ ಎಂದು ದೂರಿದರು.
ಎನ್ಪಿಸಿಸಿ ಕಂಪೆನಿಗೆ ಕಾರ್ಯನಿರ್ವಹಣಾ ಪ್ರಮಾಣಪತ್ರ ನೀಡಿಲ್ಲ ಎಂದು ತ್ರಿಪುರ , ಮಣಿಪುರ ಸರ್ಕಾರದ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದನ್ನು ಗಮನಿಸಿದರೆ ಲೂಟಿ ಹೊಡೆಯುವ ಉದ್ದೇಶ ಇದರ ಹಿಂದಿರುವುದು ಸ್ಪಷ್ಟ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ 10ಪರ್ಸೆಂಟ್ ಸರ್ಕಾರವಲ್ಲ, 30 ಪರ್ಸೆಂಟ್ ಸರ್ಕಾರ ಎಂದು ಯಡಿಯೂರಪ್ಪ ದೂರಿದರು.
ಈ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ತಮ್ಮದು ಭ್ರಷ್ಟ ಸರ್ಕಾರವಲ್ಲ ಎಂದು ಹೇಳುತ್ತಿರುವ ಸಿದ್ದರಾಮಯ್ಯ ಈ ಹಗರಣದ ಬಗ್ಗೆ 24 ಗಂಟೆಯೊಳಗೆ ಸ್ಪಷ್ಟನೆ ನೀಡಬೇಕು, ಸಂಪುಟದಿಂದ ಎಂ.ಬಿ.ಪಾಟೀಲರನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.
ಪಾಟೀಲರನ್ನು ನೇಣಿಗೆ ಹಾಕಿ: ಯಡಿಯೂರಪ್ಪ
ಲೂಟಿಕೋರ ಎಂ.ಬಿ.ಪಾಟೀಲ ಮೇಲೆ ಆದಾಯ ತೆರಿಗೆ ದಾಳಿ ನಡೆಸಿದರೆ ಸಾಲದು. ಅವರನ್ನು ನೇಣಿಗೆ ಏರಿಸಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದರು. ಈ ನೀರಾವರಿ ಸಚಿವ ಪಾಟೀಲ ಎಂಬ ಮನುಷ್ಯ ಏನಿದ್ದಾನೆ ಅವನು ಹಗಲು ದರೋಡೆ ಮಾಡುತ್ತಿದ್ದಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆತನಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದೂ ಅವರು ಹರಿಹಾಯ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.