ADVERTISEMENT

ಉಗ್ರ ಅಬ್ದುಲ್‌ ಮತೀನ್‌ ಮಾಹಿತಿಗೆ ₹ 3 ಲಕ್ಷ ಬಹುಮಾನ

​ಪ್ರಜಾವಾಣಿ ವಾರ್ತೆ
Published 13 ಮೇ 2020, 21:01 IST
Last Updated 13 ಮೇ 2020, 21:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಐಎಸ್‌ಐಎಸ್‌ ಪ್ರೇರಿತ ಉಗ್ರಗಾಮಿ ಸಂಘಟನೆ ಜತೆ ಸಂಬಂಧ ಹೊಂದಿದ್ದಾನೆ ಎನ್ನಲಾದ ತೀರ್ಥಹಳ್ಳಿ ಸೊಪ್ಪಿನಗುಡ್ಡದ ಅಬ್ದುಲ್‌ ಮತೀನ್‌ ಎಂಬಾತನ ಬಂಧನಕ್ಕೆ ನೆರವಾಗುವ ಮಾಹಿತಿ ಕೊಟ್ಟವರಿಗೆ ₹ 3 ಲಕ್ಷ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಪ್ರಕಟಿಸಿದೆ.

ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ ಎನ್‌ಐಎ ದಾಖಲಿಸಿರುವ ಪ್ರಕರಣದಲ್ಲಿ ಈತನನ್ನು ಬಂಧಿಸಬೇಕಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.

ತಮಿಳುನಾಡಿನ ಹಿಂದೂ ಮುಖಂಡರೊಬ್ಬರನ್ನು ಹತ್ಯೆ ಮಾಡಿದ ಆರೋಪಕ್ಕೆ ಒಳಗಾಗಿರುವ ಮೆಹಬೂಬ್‌ ಪಾಷಾ, ಖ್ವಾಜಾ ಮೊಹಿದ್ದೀನ್‌ ಮತ್ತು ಅವರ ಸಹಚರರು ಸ್ಥಾಪಿಸಿರುವ ಐಎಸ್‌ಐಸ್‌ ಪ್ರೇರಿತ ಉಗ್ರ ಸಂಘಟನೆಗೆ ಈ ಪ್ರಕರಣ ಸಂಬಂಧಿಸಿದೆ.

ADVERTISEMENT

ಅಬ್ದುಲ್‌ ಮತೀನ್‌ನ ಬೆಂಗಳೂರು ಗುರಪ್ಪನಪಾಳ್ಯದ ಮನೆಯಲ್ಲಿ ಪಾಷಾ ಹಲವಾರು ಸಭೆಗಳನ್ನು ನಡೆಸಿದ್ದ. ಅಲ್ಲದೆ, ಕೆಲ ಯುವಕರು ಐಎಸ್‌ಐಎಸ್‌ ಸೇರಿ ಆಘ್ಘಾನಿಸ್ತಾನ ಮತ್ತು ಸಿರಿಯಾಗಳಲ್ಲಿ ಉಗ್ರ ಚಟುವಟಿಕೆ ನಡೆಸುವಂತೆ ಪ್ರೇರೇಪಿಸಿದ್ದ. ಅನೇಕ ಪಿತೂರಿಗಳನ್ನು ರೂಪಿಸಿದ್ದ ಎಂದು ಎನ್‌ಐಎ ತಿಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಎನ್‌ಐಎ ಪಾಷಾ, ಇಮ್ರಾನ್‌, ಮೊಹಮ್ಮದ್‌ ಹನೀಫ್‌ ಖಾನ್‌, ಮೊಹಮ್ಮದ್‌ ಮನ್ಸೂರ್ ಅಲಿಖಾನ್‌, ಸಲೀಂ ಖಾನ್‌, ಹುಸೇನ್‌ ಶರೀಫ್‌, ಎಜಾಜ್‌ ಪಾಷಾ, ಜಬೀವುಲ್ಲಾ, ಸಯ್ಯದ್ ಹಜ್ಮತ್ ಉಲ್ಲಾ, ಸೈಯದ್‌ ಫೈಜೂರ್‌ ರೆಹಮಾನ್‌, ಮೊಹಮ್ಮದ್‌ ಝೈದ್‌ ಮತ್ತು ಸಾದಿಕ್‌ ಭಾಷಾ ಅವರನ್ನು ಬಂಧಿಸಿದೆ.

ಮತೀನ್‌ ತನ್ನ ಸ್ನೇಹಿತರಾದ ಸಲೀಂ ಹಾಗೂ ಝೈದ್‌ ಅವರ ಮುಖಾಂತರ ಪಾಷಾನನ್ನು ಸಂಪರ್ಕಿಸಿದ್ದ. ವಿದೇಶದಿಂದ ಆನ್‌ಲೈನ್‌ ಮೂಲಕ ಉಗ್ರಗಾಮಿ ಚಟುವಟಿಕೆ ನಿಯಂತ್ರಿಸುತ್ತಿದ್ದವನ ಜತೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.