ಹೊಸಪೇಟೆ: ಇಲ್ಲಿ ಶನಿವಾರ ಸಂಜೆ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಕಾರ್ಯಕ್ರಮಕ್ಕೆ ಪಕ್ಷದ ಹಾಲಿ ಶಾಸಕ ಆನಂದ್ ಸಿಂಗ್ ಗೈರು ಹಾಜರಾಗಿದ್ದರು.
‘ಪಕ್ಷದ ಕೆಲವು ಮುಖಂಡರು ಟಿಕೆಟ್ ಆಕಾಂಕ್ಷಿಗಳೆಂದು ಹೇಳಿಕೊಂಡು ಪ್ರಚಾರ ನಡೆಸುತ್ತಿದ್ದು, ಅದನ್ನು ತಡೆಯಬೇಕು. ಇಲ್ಲವಾದಲ್ಲಿ ಯಾತ್ರೆಯಿಂದ ದೂರ ಉಳಿಯುತ್ತೇನೆ’ ಎಂದು ಆನಂದ್ ಸಿಂಗ್ ಪಕ್ಷದ ಹಿರಿಯ ಮುಖಂಡರಿಗೆ ಹೇಳಿದ್ದರು. ಆದರೆ, ಪಕ್ಷದ ವರಿಷ್ಠರಿಂದ ಸೂಕ್ತ ಭರವಸೆ ಸಿಗದ ಕಾರಣ ಯಾತ್ರೆಯಿಂದ ಅವರು ದೂರ ಉಳಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಶಾಸಕರನ್ನು ಮನವೊಲಿಸುವ ಪ್ರಯತ್ನ ವಿಫಲವಾದ ಕಾರಣ ಪೂರ್ವ ನಿರ್ಧರಿತ ಹೊಸಪೇಟೆಯ ಕಾರ್ಯಕ್ರಮವನ್ನು ರದ್ದುಗೊಳಿಸಲು ಪಕ್ಷ ಮುಂದಾಗಿತ್ತು. ಆದರೆ, ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎಂಬ ಕಾರಣಕ್ಕಾಗಿ ಕಾರ್ಯಕ್ರಮ ಸಂಘಟಿಸಲಾಗಿತ್ತು ಎನ್ನಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ‘ರದ್ದಾಗಿದ್ದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೀರಿ. ಮತ್ತೊಂದು ದಿನ ಕಾರ್ಯಕ್ರಮ ಆಯೋಜಿಸಲು ಆನಂದ್ ಸಿಂಗ್ ಸಲಹೆ ನೀಡಿದ್ದರು. ಆದರೆ, ಪೂರ್ವ ನಿರ್ಧಾರದಂತೆ ನಡೆದಿದೆ. ಮುಂದಿನ ಕಾರ್ಯಕ್ರಮದಲ್ಲಿ ಅವರು ನಮ್ಮೊಂದಿಗೆ ಇರುತ್ತಾರೆ’ ಎಂದರು.
ಆನಂದ್ ಸಿಂಗ್ ಪ್ರತಿಕ್ರಿಯೆಗೆ ಸಿಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.