ADVERTISEMENT

ದಿಂಗಾಲೇಶ್ವರ ಶಾಖಾಮಠದ ಸ್ವಾಮೀಜಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 19:30 IST
Last Updated 8 ಜನವರಿ 2018, 19:30 IST
ದಿಂಗಾಲೇಶ್ವರ ಶಾಖಾಮಠದ ಸ್ವಾಮೀಜಿ ಆತ್ಮಹತ್ಯೆ
ದಿಂಗಾಲೇಶ್ವರ ಶಾಖಾಮಠದ ಸ್ವಾಮೀಜಿ ಆತ್ಮಹತ್ಯೆ   

ಹಾನಗಲ್ (ಹಾವೇರಿ ಜಿಲ್ಲೆ): ತಾಲ್ಲೂಕಿನ ಹುಲ್ಲತ್ತಿ ಗ್ರಾಮದಲ್ಲಿನ ಬಾಲೇಹೊಸೂರು ದಿಂಗಾಲೇಶ್ವರ ಶಾಖಾಮಠದ ಮಹಾಲಿಂಗ ಸ್ವಾಮೀಜಿ (38) ಮಠದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಸ್ಥಳದಲ್ಲಿ ಡೆತ್ ನೋಟ್‌ ಸಿಕ್ಕಿದ್ದು, ‘ನನ್ನ ಸಾವಿಗೆ ನಾನೇ ಕಾರಣ. ಮನಃಶಾಂತಿ ಇಲ್ಲದೇ ಆತ್ಮಹತ್ಯೆಗೆ ಶರಣಾಗಿದ್ದೇನೆ. ನನ್ನ ಸಮಾಧಿಯನ್ನು ಮಠದಲ್ಲಿಯೇ ಮಾಡಿ’ ಎಂದು ಬರೆಯಲಾಗಿದೆ.

ಬೆಳಗಾವಿ ಜಿಲ್ಲೆಯ ಮಾರಿಹಾಳದವರಾಗಿದ್ದ ಇವರು, ಸನ್ಯಾಸ ದೀಕ್ಷೆ ಪಡೆದ ನಂತರ ಕೆಲಕಾಲ ಹುಬ್ಬಳ್ಳಿಯಲ್ಲಿ ನೆಲೆಸಿದ್ದರು. ಆರು ತಿಂಗಳ ಹಿಂದೆಯಷ್ಟೇ ಹುಲ್ಲತ್ತಿ ಶಾಖಾ ಮಠಕ್ಕೆ ನಿಯೋಜನೆಗೊಂಡಿದ್ದರು.

ADVERTISEMENT

‘ಇದೇ 6 ರಂದು ಶಿಗ್ಗಾವಿ ಸಮೀಪದ ತಡಸ್‌ ಕ್ರಾಸ್‌ ಬಳಿಯಲ್ಲಿ ಇದೇ ಸ್ವಾಮೀಜಿಯ ಕಾರು ಮತ್ತು ಬೈಕ್‌ ನಡುವೆ ಅಪಘಾತವಾಗಿತ್ತು. ಈ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್‌ ಸವಾರ, ಚಿಕಿತ್ಸೆ ಫಲಿಸದೇ ಭಾನುವಾರ ಮೃತಪಟ್ಟಿದ್ದ. ಈ ಘಟನೆಯಿಂದ ಸ್ವಾಮೀಜಿ ನೊಂದುಕೊಂಡಿದ್ದರು. ಇದರಿಂದಾಗಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂದೂ ಹೇಳಲಾಗುತ್ತಿದೆ.

ವಿಷಯ ತಿಳಿದು ಗ್ರಾಮಕ್ಕೆ ಭೇಟಿ ನೀಡಿದ ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ‘ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದಂತೆ, ಅವರಲ್ಲಿ ಮನಃಶಾಂತಿ ಇಲ್ಲದಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಅಂತಹ ಸಮಸ್ಯೆಗಳಿದ್ದರೆ ನನ್ನಲ್ಲಿ ಹೇಳಿಕೊಳ್ಳಬೇಕಿತ್ತು. ಎಲ್ಲದಕ್ಕೂ ಪರಿಹಾರ ಇದೆ. ಸಾವು ಅಂತಿಮವಲ್ಲ’ ಎಂದರು.

‘ಗ್ರಾಮದ ಭಕ್ತರು ಹೇಳುವಂತೆ ಶನಿವಾರ ತಡಸ್‌ ಕ್ರಾಸ್‌ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಸಾವು ಅವರಿಗೆ ಆಘಾತ ತಂದಿರಬಹುದು’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.