ಪಡುಬಿದ್ರಿ: ಉಚ್ಚಿಲದಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ತೀವ್ರ ಗಾಯಗೊಂಡಿದ್ದ ಹಿಂದೂ ಯುವಕನನ್ನು ಮುಸ್ಲಿಮ್ ಯುವಕರ ತಂಡ ಆಸ್ಪತ್ರೆಗೆ ಸೇರಿಸಿದೆ. ಜತೆಗೆ ಶೀಘ್ರವೇ ಗುಣಮುಖವಾಗುವಂತೆ ಪ್ರಾರ್ಥನೆ ಮಾಡಲು ಸಾಮಾಜಿಕ ಜಾಲ ತಾಣಗಳ ಮೂಲಕ ಮನವಿ ಮಾಡಿದ್ದಾರೆ.
ಭಾನುವಾರ ರಾತ್ರಿ 10.30ರ ವೇಳೆಗೆ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಕಾರೊಂದು ಪಾದಚಾರಿ ಮಿಥುನ್ ಎಂಬವರಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಬಡಾ ಗ್ರಾಮ ಪಂಚಾಯ್ತಿ ಸದಸ್ಯ ದೀವ್ ರಫೀಕ್ ಎಂಬುವರು ಕೂಡಲೇ ಅವರ ಕಾರಿನಲ್ಲಿ ಸ್ನೇಹಿತರ ಜತೆಗೆ ಕರೆದುಕೊಂಡು ಹೋಗಿ ಉಡುಪಿ ಆಸ್ಪತ್ರೆಗೆ ದಾಖಲಿಸಿದರು. ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಮಿಥುನ್ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಎಂದು ಉಚ್ಚಿಲದ ಮುಸ್ಲಿಂ ಯುವಕರು ಸಾಮಾಜಿಕ ಜಾಲ ತಾಣಗಳಲ್ಲಿ ಮನವಿ ಮಾಡುತ್ತಿದ್ದಾರೆ.
ದೀವ್ ರಫೀಕ್ ಅವರ ಕಾರ್ಯಕ್ಕೆ ಉಚ್ಚಿಲ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಯಾವುದೇ ಅಪಘಾತವಾದರೂ ಸ್ವಾರ್ಥ, ಫಲಾಪೇಕ್ಷೆ ಇಲ್ಲದೆ ಮಾನವೀಯ ನೆಲೆಯಲ್ಲಿ ಸೇವೆ ನೀಡುತ್ತಾರೆ ಎನ್ನುತ್ತಾರೆ ಸ್ಥಳೀಯರಾದ ಶಫಿ ಉಚ್ಚಿಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.